[1]ಉಡುಪಿ: ಅಭಿಪ್ರಾಯಗಳನ್ನು ಯಾರಾದರೂ ಖಂಡಿಸಬೇಕೆಂದಿದ್ದರೆ ಡಾ.ಶಿವರಾಮ ಕಾರಂತ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪಿ.ಲಂಕೇಶ್ ರಂಥಹ ಬರಹಗಾರರ ಬರಹಗಳ ಬಗ್ಗೆ ಹೇಳಲಿ, ನಾನು ಕೇವಲ ಅವರ ಪ್ರತಿಫಲನವಷ್ಟೆ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾತನಾಡಿದ್ದಕ್ಕೆ ನನ್ನ ವಿರುದ್ಧ ಬೆದರಿಕೆ ಹಾಕುವುದರಲ್ಲಿ ಅರ್ಥವಿಲ್ಲ. ಅವರ ಪುಸ್ತಕಗಳನ್ನು ಸಾಕಷ್ಟು ಓದಿ ಬೆಳೆದ ನಾನು ಅವರ ಬರಹಗಳಿಂದ ಪ್ರಭಾವಿತನಾಗಿದ್ದೇನೆ. ನನಗೆ ಕಂಡಿದ್ದನ್ನು ನಾನು ಹೇಳದಿದ್ದರೆ ಅವರನ್ನು ಮೋಸಗೊಳಿಸಿದಂತೆ ಆಗುತ್ತದೆ ಎಂದು ಖ್ಯಾತ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಅವರು ನಿನ್ನೆ ಶಿವರಾಮ ಕಾರಂತರ ಹುಟ್ಟೂರಾದ ಕೋಟದಲ್ಲಿ 13ನೇ ವಾರ್ಷಿಕ ಡಾ. ಕೋಟ ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಸಮಾರಂಭದಲ್ಲಿ 2017ನೇ ಸಾಲಿನ ಶಿವರಾಮ ಕಾರಂತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಗೌರಿ ಲಂಕೇಶ್ ಹತ್ಯೆ ವಿಚಾರದಲ್ಲಿ ಪ್ರಧಾನಿ ಮೋದಿಯವರ ಮೌನದ ಕುರಿತು ತಾವು ನೀಡಿದ್ದ ಹೇಳಿಕೆಗೆ ಸಮಾಜದ ಹಲವರು ತಮಗೆ ಬೆಂಬಲ ಸೂಚಿಸಿರುವುದು ನೋಡಿದರೆ ನಾನು ಈಗ ಏಕಾಂಗಿಯಾಗಿಲ್ಲ ಎಂಬ ಭಾವನೆ ಉಂಟಾಗಿದೆ ಎಂದರು.
ಇತ್ತೀಚೆಗೆ ತಾವಾಡಿದ ಮಾತುಗಳಿಂದ ಜನರ ಭಾವನೆಗಳಿಗೆ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಕೇಳಿದರು. ಡಾ.ಶಿವರಾಮ ಕಾರಂತರಂತಹ ದಂತಕಥೆ ಹುಟ್ಟಿದ ಊರಿಗೆ ಭೇಟಿ ನೀಡುತ್ತಿರುವುದು ನನ್ನ ತಾತನ ಮನೆಗೆ ಹೋದಷ್ಟು ಖುಷಿಯಾಗುತ್ತಿದೆ. ನಾನಿಂದು ಭಾವುಕನಾಗಿದ್ದೇನೆ. ಕಾರಂತರ ಪುಸ್ತಕಗಳಲ್ಲಿ ಪರಿಸರ, ಅರಣ್ಯಗಳ ಬಗ್ಗೆ ವರ್ಣನೆಯಿದೆ ಎಂದರು. ಕೈಗಾದಲ್ಲಿ ಪರಮಾಣು ವಿದ್ಯುತ್ ಯೋಜನೆಯನ್ನು ಕೂಡ ಪ್ರಕಾಶ್ ರಾಜ್ ವಿರೋಧಿಸಿದರು.