[1]ಮಂಗಳೂರು: ಮಂಗಳೂರಿನಲ್ಲಿ ನಡೆಯುತ್ತಿರುವ ಅಕ್ರಮ ಮಸಾಜ್ ಪಾರ್ಲರ್ ಗಳ ವಿರುದ್ಧ ಸಮರ ಸಾರಿದ್ದ ಮಂಗಳೂರಿನ ಮೇಯರ್ ಕವಿತಾ ಸನಿಲ್ ಇತ್ತೀಚೆಗೆ ಅಕ್ರಮ ಫ್ಲಾಟ್ ಗಳ ಮೇಲೆ ದಾಳಿ ಆರಂಭಿಸಿದ್ದಾರೆ. ಮಂಗಳೂರು ಮೇಯರ್ ಅವರ ಈ ಡೇರ್ ಡೆವಿಲ್ ವ್ಯಕ್ತಿತ್ವಕ್ಕೆ ಹ್ಯಾಟ್ಸ್ ಆಫ್ ಅನ್ನಲೇಬೇಕು . ಆದರೆ ಈ ಎಲ್ಲ ಅಕ್ರಮಗಳ ವಿರುದ್ಧ ತಿರುಗಿ ಬಿದ್ದಿರುವ ಮೇಯರ್ ಅವರಿಗೆ ಅವರ ಪಾಲಿಕೆ ವ್ಯಾಪ್ತಿಗೆ ಬರುವ ರಸ್ತೆಗಳ ದುಸ್ಥಿತಿ ಏಕೆ ಕಾಣುತ್ತಿಲ್ಲ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ರಸ್ತೆಗಳಲ್ಲಿ ಚರಂಡಿ ಇದೆಯೋ ಅಥವಾ ಚರಂಡಿಯ ಮಧ್ಯೆ ರಸ್ತೆ ನಿರ್ಮಾಣವಾಗಿದೆಯೋ ಅನ್ನುವುದೇ ಜನರಿಗೆ ಅರ್ಥವಾಗುತ್ತಿಲ್ಲ. ಪ್ರತಿಭಟನೆ ರಸ್ತೆಗುಂಡಿಗಳೋ, ಮೃತ್ಯುಕೂಪಗಳೋ? ನಗರದ ಕದ್ರಿ ಶಿವಭಾಗ್, ನಂತೂರು ಸರ್ಕಲ್ , ಬಿಜೈ, ಶಕ್ತಿನಗರ, ಪಡೀಲ್, ಪಂಪ್ ವಲ್, ಕಂಕನಾಡಿ, ಕಂಕನಾಡಿ ಬೈಪಾಸ್, ಬೆಂದೂರ್ ವೆಲ್ ಪ್ರದೇಶಗಳಲ್ಲಿರುವ ರಸ್ತೆಗಳು ಹದಗೆಟ್ಟಿದ್ದು ಈ ರಸ್ತೆಗಳಲ್ಲಿ ಸಾಗುವ ವಾಹನ ಚಾಲಕರು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ . ರಸ್ತೆಗಳ ಮೇಲೇಕೆ ಸಮರವಿಲ್ಲ? ಕವಿತಾ ಸನಿಲ್ ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಅಕ್ರಮಗಳ ವಿರುದ್ಧ ಸಿಡಿದೆದ್ದು ದಾಳಿ ನಡೆಸಿದರು. ಸಿಕ್ಕ ಸಿಕ್ಕ ಕಡೆ ಫೋಟೋಗೆ ಪೋಸ್ ನೀಡಿದರು. ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿದರು. ಆದರೆ ತಮ್ಮ ಪಾಲಿಕೆ ವ್ಯಾಪ್ತಿಯಲ್ಲಿರುವ ಹದಗೆಟ್ಟ ರಸ್ತೆಗಳ ವಿರುದ್ಧ ಮೇಯರ್ ಕವಿತಾ ಸನಿಲ್ ಏಕೆ ಸಮರ ಸಾರುತ್ತಿಲ್ಲ ಎಂಬುದೇ ಅರ್ಥವಾಗುತ್ತಿಲ್ಲ ಎನ್ನುತ್ತಾರೆ ಶಿವಭಾಗ್ ನಿವಾಸಿ ಕೃಷ್ಣ .
[2]ಇದೇನಾ ಸ್ಮಾರ್ಟ್ ಸಿಟಿ? ಮಂಗಳೂರು ನಗರದ ಮುಖ್ಯ ರಸ್ತೆಗಳು ಬಹುತೇಕ ಕಾಂಕ್ರೀಟಿಕರಣಗೊಂಡಿವೆ. ಆದರೆ ಇತರ ರಸ್ತೆಗಳ ಪಾಡೇನು? ಸ್ಮಾರ್ಟ್ ಸಿಟಿಯಾಗಿ ಬದಲಾಗಬೇಕಿರುವ ಮಂಗಳೂರು ಮಹಾನಗರದ ಹದಗೆಟ್ಟ ರಸ್ತೆಗಳಿಂದಾಗಿ ನಗರದ ಬಹುತೇಕ ಭಾಗಗಳಲ್ಲಿ ಟ್ರಾಫಿಕ್ ಜಾಮ್ ಮಾಮೂಲಾಗಿದೆ. ಈ ಹದಗೆಟ್ಟ ರಸ್ತೆಗಳಿಂದಾಗಿ ದಿನಂಪ್ರತಿ ರಸ್ತೆ ಅಪಘಾತಗಳು ಸಂಭವಿಸುತ್ತಲೇ ಇವೆ. ಇದೇ ರಸ್ತೆಗಳಲ್ಲಿ ಮನೆ ಮನೆಗೆ ಕಾಂಗ್ರೆಸ್ ಅಭಿಯಾನ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷದ ನಾಯಕರು ಇದೇ ರಸ್ತೆಗಳಲ್ಲಿ ಸಾಗಿ “ಮನೆ ಮನೆಗೆ ಕಾಂಗ್ರೆಸ್ ” ಅಭಿಯಾನ ಆರಂಭಿಸಿದ್ದಾರೆ. ಆದರೆ ರಸ್ತೆ ದುರಸ್ತಿಯ ಬಗ್ಗೆ ಕಾಳಜಿ ವಹಿಸಿಲ್ಲ.
ರಾಷ್ಟ್ರೀಯ ಹೆದ್ದಾರಿಯ 66ರಲ್ಲೂ ಅವ್ಯವಸ್ಥೆ ಇದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳ ಪಾಡಾದರೆ ಇನ್ನು ಮಂಗಳೂರು ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಅವ್ಯವಸ್ಥೆ ಕೇಳುವವರೇ ಇಲ್ಲದಂತಾಗಿದೆ . ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ರಸ್ತೆಯ ಜೊತೆಗೆ ಸರ್ವಿಸ್ ರಸ್ತೆಗಳು ಕೂಡ ಹದಗೆಟ್ಟಿದೆ. ಸಾವಿರಾರು ಕೋಟಿ ಎಲ್ಲೋಯ್ತು? ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಸಾವಿರಾರು ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆ ಕೇವಲ ಹೇಳಿಕೆಯಾಗೆ ಉಳಿದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಗಾಢ ನಿದ್ರೆಯಿಂದ ಎಚ್ಚರಿಸಲು ಸಂಸದರಿಗೆ ಸಮಯವಿಲ್ಲವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ.