[1]ಮಂಗಳೂರು: ನಗರಾಭಿವೃದ್ಧಿ ಮತ್ತು ಹಜ್ ಸಚಿವ ರೋಷನ್ ಬೇಗ್ ತೀರ ಕೆಳಮಟ್ಟದ ಭಾಷೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಮಾತನಾಡಿರುವುದು ಸಹಿಸಲಸಾಧ್ಯ. ಇದರ ವಿರುದ್ಧ ಸಾಮೂಹಿಕವಾಗಿ ಜನಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯಾದ್ಯಂತ `ಐ ಆ್ಯಮ್ ಮೋದಿ’ ಎಂಬ ಅಭಿಯಾನ ನಡೆಸಲಾಗುವುದು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಟೀಕಿಸಲು ಹಕ್ಕಿದೆ. ಹಾಗಂತ ಕೀಳು ಭಾಷೆ ಬಳಸುವುದಲ್ಲ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕೂಡ ನನ್ನ ವಿರುದ್ಧ ಇದೇ ರೀತಿ ಮಾತನಾಡಿದ್ದರು. ಇದನ್ನು ನಾನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಅವರನ್ನು ಪಕ್ಷದ ಹಿರಿಯರು ಸರಿಪಡಿಸಬಹುದು ಎಂದು ಭಾವಿಸಿದ್ದೆ. ಆದರೆ ಈ ಚಾಳಿ ಇತರೆ ಸಚಿವರಲ್ಲೂ ಮುಂದುವರೆದಿದೆ ಎಂದರು.
ಪ್ರಧಾನಮಂತ್ರಿ ಅಥವಾ ಮುಖ್ಯಮಂತ್ರಿ ನಿರ್ದಿಷ್ಟ ಪಕ್ಷಕ್ಕೆ ಸೀಮಿತರಾದವರಲ್ಲ. ಅವರು ಎಲ್ಲರ ಪ್ರತಿನಿಧಿ. ಅವರ ಬಗ್ಗೆ ಕೀಳಾಗಿ ಟೀಕಿಸುವುದು ಇದೇ ಕೊನೆಯಾಗಬೇಕು. ಮಹಿಳೆಯರನ್ನು ಬಳಸಿಕೊಂಡು ತುಚ್ಛವಾಗಿ ಟೀಕಿಸುವುದನ್ನು ಇನ್ನಾದರೂ ನಿಲ್ಲಿಸಬೇಕು. ಈ ಹಿನ್ನೆಲೆಯಲ್ಲಿ ಎಲ್ಲರೂ ಜೊತೆಸೇರಿ `ಐ ಆ್ಯಮ್ ಮೋದಿ’ ಎಂಬ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಫೇಸ್ಬುಕ್, ವಾಟ್ಸಪ್ ಹಾಗೂ ಟ್ವಿಟರ್ಗಳಲ್ಲಿ ಪ್ರಧಾನಿ ಪರ ಧ್ವನಿಯೆತ್ತಬೇಕೆಂದರು.
ನಾಳೆಯಿಂದಲೇ ಈ ಅಭಿಯಾನ ನಡೆಯಲಿದೆ. ನನ್ನ ವಿರುದ್ಧ ಕೀಳುಮಟ್ಟದಲ್ಲಿ ಮಾತನಾಡಿದ್ದಕ್ಕೆ ಸಚಿವ ರಮಾನಾಥ ರೈ ವಿರುದ್ಧ ಹಿತೈಷಿಯೊಬ್ಬರು ದೂರು ನೀಡಿದ್ದಾರೆ. ಆದರೆ ಸಚಿವ ರೋಷನ್ ಬೇಗ್ ವಿರುದ್ಧ ನಾವು ದೂರು ನೀಡುವುದಿಲ್ಲ. ಅದರ ಬದಲು ವಿನಾ ಕಾರಣ ರಾಜ್ಯದ ಮಾನ ಹರಾಜು ಹಾಕಬೇಡಿ ಎಂದು ಜಾಗೃತಿ ಅಭಿಯಾನವನ್ನು ನಡೆಸುತ್ತೇವೆ.
ಹಿಂದೆ ರಾಹುಲ್ ಗಾಂಧಿ ಪ್ರಧಾನಿಗೆ ನರಹಂತಕ ಎಂದು ಬೈದಿದ್ದರು. ಆದರೆ ಈಗ ರೋಷನ್ ಬೇಗ್ ಪ್ರಯೋಗಿಸಿದ ಮಾತನ್ನು ಸಾಮಾನ್ಯರು ಪುನರುಚ್ಚಲಿಸಲೂ ಸಾಧ್ಯವಿಲ್ಲ. ಮೋದಿಗೆ ಅಥವಾ ಮುಖ್ಯಮಂತ್ರಿಗೆ ಬೈದರೆ ಎಲ್ಲರಿಗೆ ಬೈದಂತೆ. ಹೀಗೆ ಬೈಯ್ಯುವ ಬದಲು ಅಭಿವೃದ್ಧಿಯ ಬಗ್ಗೆ ಮಾತನಾಡಲಿ ಎಂದು ಚಕ್ರವರ್ತಿ ಸೂಲಿಬೆಲೆ ಸಚಿವರುಗಳಿಗೆ ಕಿವಿಮಾತು ಹೇಳಿದರು.