[1]ಮೂಡುಬಿದಿರೆ : ಆಳ್ವಾಸ್ ನುಡಿಸಿರಿ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನವನ್ನು ಕನ್ನಡದ ಖ್ಯಾತ ವಿಮರ್ಶಕ, ವಿದ್ವಾಂಸ ಸಿ.ಎನ್. ರಾಮಚಂದ್ರನ್ ರತ್ನಾಕರವರ್ಣಿ ವೇದಿಕೆಯಲ್ಲಿ ಉದ್ಘಾಟಿಸಿದರು.
‘ಕರ್ನಾಟಕ:ಬಹುತ್ವದ ನೆಲೆಗಳು’ಪರಿಕಲ್ಪನೆಯಲ್ಲಿ ನಡೆಯುತ್ತಿರುವ ಸಮ್ಮೇಳನವನ್ನು ಉದ್ಘಾಟಿಸಿದ ಸಿ.ಎನ್. ರಾಮಚಂದ್ರನ್, “ಪ್ಲೂರಲಿಜ಼ಮ್ ಅಥವಾ ಬಹುತ್ವ” ದ ಕಲ್ಪನೆಯು ಇಂದಿಗೆ ಪ್ರಸ್ತುತವಾದುದು; ಇದು ಅಸ್ಮಿತತೆಯ ರಾಜಕಾರಣ/ ಐಡೆಂಟಿಟಿ ಪಾಲಿಟಿಕ್ಸ್ ಆಗಿ ಬದಲಾಗುತ್ತಿದೆ. ಹಲವು ಸಂಸ್ಕೃತಿಗಳ ಸಹಬಾಳ್ವೆ ಹಾಗು ಬೆಳವಣಿಗೆಯಿಂದ ಬಹುತ್ವ ಸಾಧಿಸಬೇಕಾಗಿದೆ.
[2]ಭಾರತದಂತಹ ರಾಷ್ಟ್ರದಲ್ಲಿ ಪ್ರತಿಯೊಂದರಲ್ಲೂ ಬಹುತ್ವವನ್ನು ಕಾಣಬಹುದು. ಬಹುತ್ವದ ಜೊತೆಗೆ ಬರುವ ಮತ್ತೊಂದು ವಿಚಾರವೆಂದರೆ ಅಸ್ಮಿತೆಯದ್ದು. ಬಹುತ್ವದಲ್ಲಿರುವ ಅಸ್ಮಿತೆ ಒಂದು ದಿಕ್ಕಿನಲ್ಲಿದ್ದರೆ, ಬಹುತ್ವೆಂಬ ವಿಶಾಲ ಪರಿಕಲ್ಪನೆ ಮತ್ತೊಂದು ದಿಕ್ಕಿನಲ್ಲಿ ಸಾಗುತ್ತಿರುತ್ತದೆ. ಇದರ ಮಧ್ಯೆ ಸಾಮರಸ್ಯವನ್ನು ಸಾಧಿಸಬೇಕಾದ್ದು ತುಂಬಾ ಮುಖ್ಯ’ ಎಂದರು.
ಅಸ್ಮಿತೆ ಹಾಗೂ ಬಹುತ್ವಗಳ ಬಗ್ಗೆ ವಿವರಿಸಿದ ಅವರು, ಪ್ರತಿಯೊಂದು ಭಾಷೆ, ಧರ್ಮ, ಸಂಸ್ಕೃತಿ, ಪದ್ಧತಿಗಳೂ ತಮ್ಮ ಅಸ್ಮಿತೆಯ ಉಳಿವಿಗಾಗಿ ಹೋರಾಡಿವೆ. ಭಾಷೆಯ ವಿಷಯದಲ್ಲಿ ನಾವು ಒಂದಾದರೂ ಧರ್ಮ-ಪಂಥಗಳ ವಿಚಾರ ಬಂದಾಗ ‘ನಮ್ಮತನ’ಕ್ಕಾಗಿ ಹೋರಾಡಿ ಬೇರ್ಪಡುತ್ತೇವೆ. ನಮ್ಮ ಅಸ್ಮಿತೆಯನ್ನು ಸೂಕ್ಷ್ಮಗೊಳಿಸಿದಷ್ಟೂ ನಮ್ಮಲ್ಲಿ ಬಿರುಕುಗಳು ಜಾಸ್ತಿಯಾಗುತ್ತದೆ. ಅನ್ಯರು ಹೆಚ್ಚಾಗುತ್ತಾರೆ. ನಮ್ಮಲ್ಲಿ ಅಧಿಕಾರ ಉಳಿಸಿಕೊಳ್ಳಲು, ಅಧಿಕಾರ ಪಡೆಯಲು ಸಾಕಷ್ಟು ಗುಂಪುಗಳು ಹೆಣಗುತ್ತಿವೆ. ನಮ್ಮ ಅಸ್ಮಿತೆಗಳಿಂದಾಗಿ ನಾವು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದೇವೆ, ಆದರೆ ಸಂಘರ್ಷವಿಲ್ಲದೇ ಬಾಳಬಹುದು ಎಂದು ನಮ್ಮ ಸಂವಿಧಾನ ತಿಳಿಸುತ್ತದೆ. ಬಹುತ್ವವನ್ನು ಸಾಧಿಸುವುದಕ್ಕಾಗಿಯೇ ನಮಗೆ ಸರ್ವಧರ್ಮ ಸಮಾನತೆಯನ್ನು ನೀಡಲಾಗಿದೆ ಎಂದು ಹೇಳಿದರು.
[3]ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷತೆಯನ್ನು ವಹಿಸಿಕೊಂಡಿರುವ ಡಾ. ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಆಶಯ ಭಾಷಣದಲ್ಲಿ ಬಹುತ್ವದ ಪರಿಕಲ್ಪನೆಯ ಹಲವು ಆಯಾಮಗಳನ್ನು ತೆರೆದಿಟ್ಟರು. ‘ಬಹುತ್ವವೆಂಬ ಸೋಜಿಗ ಸಾಮಾಜಿಕ ಅನನ್ಯತೆಗೆ ತುಂಬಾ ಮುಖ್ಯ. ಸಮಾಜದಲ್ಲಿ ಅನ್ಯೋನ್ಯತೆಯಿರಬೇಕೆಂದರೆ, ಸಾಮರಸ್ಯವಿರಬೇಕೆಂದರೆ ಬಹುತ್ವ ಬೇಕು. ಬಹುತ್ವವನ್ನು ನಾಶ ಮಾಡಿದರೆ ಸಮಾಜವನ್ನು ನಾಶ ಮಾಡಿದಂತೆ. ಈ ಮಾತನ್ನು ಜಗತ್ತಿನ ವಿದ್ವಾಂಸರು ಕೂಡ ಅನುಮೋದಿಸಿದ್ದಾರೆ’ ಎಂದರು.
[4]ಬಹುತ್ವವೆಂಬುದು ಕೇವಲ ಭಾಷೆ, ಸಾಹಿತ್ಯಕ್ಕೆ ಸಂಬಂಧಿಸಿದ್ದಲ್ಲ. ಅದು ನಮ್ಮ ಜೀವನದ ಪ್ರತೀವಸ್ತುವಿನಲ್ಲಿದೆ, ಪ್ರತೀ ಹಂತದಲ್ಲಿದೆ. ಬಹುತ್ವವನ್ನು ವಿರೋಧಿಸುವ ಗುಂಪು ಯಾವುದೇ ಧರ್ಮದಲ್ಲಿದ್ದರೂ ಕೂಡ ಅದು ಖಂಡನಾರ್ಹ. ಸಮಾಜದಲ್ಲಿ ಎಲ್ಲವೂ ಒಂದು ಹದದಲ್ಲಿರಬೇಕು. ಎಲ್ಲರಲ್ಲು ಬೆರೆತಾಗಲೂ ಕೂಡ ನಮ್ಮ ಅಸ್ಮಿತೆಯನ್ನು ಕಾಪಾಡಿಕೊಂಡು ಹೋಗಬೇಕು. ಬಹುತ್ವದ ನೆಲೆಯಲ್ಲಿದ್ದರೂ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ನುಡಿಸಿರಿ ಸಮ್ಮೇಳನದ ಆಶಯವನ್ನು ಜನರ ಮುಂದಿಟ್ಟರು. ಈ ಸಮ್ಮೇಳನವನ್ನು ಕೇವಲ ಭಾಷೆ ಹಾಗೂ ಸಾಹಿತ್ಯಕ್ಕೆ ಸೀಮಿತಗೊಳಿಸದೇ ಸಮಗ್ರತೆಯ ಪರಿಕಲ್ಪನೆಯಲ್ಲಿ ಮಾಡುತ್ತಿದ್ದೇವೆ. ಒಂದು ನುಡಿಸಿರಿಯಿಂದ ಸಮಾಜದಲ್ಲಿ ಹೆಚ್ಚಿನ ಬದಲಾವಣೆ ತರಲಾಗದು ಆದರೆ ನಮ್ಮ ಭಾಷೆ, ಸಂಸ್ಕೃತಿ, ಸಂಸ್ಕಾರಗಳ ಅಭಿವೃದ್ಧಿಗಾಗಿ ಇದು ನಮ್ಮ ಅಳಿಲು ಸೇವೆ ಎಂದರು.
ಪುಸ್ತಕ ಬಿಡುಗಡೆ
ನುಡಿಸಿರಿ 2016 ರ ನೆನಪಿನ ಸಂಚಿಕೆ ವಾಙ್ಮಯ, ತೇಜಸ್ವಿನಿ ಹೆಗಡೆ ಅವರ ಹಂಸಯಾನ, ಅಬ್ದುಲ್ ಹಮೀದ್ ರ ಒಂಟಿ ತೆಪ್ಪ, ರವಿಶಂಕರ್ ಅಂಕುರ್ ರ ಎತ್ತಿಕೊಂಡವರ ಕೂಸು, ಗಣೇಶ್ ಭಾರದ್ವಾಜ್ರ ನಗು ಮುಂತಾದ ಕೃತಿಗಳು ಲೋಕಾರ್ಪಣೆಗೊಂಡವು.
ಈ ಸಂಧರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್, ಸಂಸದ ನಳೀನ್ ಕುಮಾರ್ ಕಟೀಲು, ಶಾಸಕ ಹಾಗು ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಸಚಿವ ಅಮರನಾಥ ಶೆಟ್ಟಿ ಹಾಗು ಸಂಸ್ಥೆಯ ಟ್ರಸ್ಟಿ ಜಯಶ್ರೀ ಎ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಏರ್ಯ ಲಕ್ಷ್ಮಿ ನಾರಾಯಣ ಆಳ್ವ, ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಮೂಡುಬಿದಿರೆ ಪುರಸಭೆಯ ಹರಿಣಾಕ್ಷಿ ಉಪಸ್ಥಿತರಿದ್ದರು.
ಕಣ್ಸೆಳೆದ ಮೆರವಣಿಗೆ
ಆಳ್ವಾಸ್ ನುಡಿಸಿರಿಯ ಉದ್ಘಾಟನೆಯ ಪೂರ್ವಭಾವಿಐಆಗಿ ಸಾಂಸ್ಕೃತಿಕ ಮೆರವಣಿಗೆಯನ್ನು ಆಯೋಜಿಸಲಾಗಿದ್ದ ಮೆರವಣಿಗೆಯನ್ನು ಮೂಲ್ಕಿಯ ಫಾ. ಎಫ್.ಎಕ್ಸ್.ಗೋಮ್ಸ್ ಉದ್ಘಾಟಿಸಿದರು. ಣಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನದ ವೈಭವಕ್ಕೆ ಹಿಡಿದ ಕನ್ನಡಿಯಂತಿತ್ತು. ಮೆರವಣಿಗೆಯಲ್ಲಿ ಸುಮಾರು ೭೯ ಸಾಂಸ್ಕೃತಿಕ ತಂಡಗಳು ಭಾಗವಹಿಸಿದ್ದು ಸಮ್ಮೇಳನದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಎತ್ತಿಹಿಡಿದವು. ಮೆರವಣಿಗೆಯಲ್ಲಿ ಕರ್ನಾಟಕ ಮಾತ್ರವಲ್ಲದೇ ಕೇಋಳ, ರಾಜಸ್ಥಾನ, ಭಾರತದ ವಿವಿಧ ಜನಪದೀಯ ಶೈಲಿಗಳ ತಂಡಗಳು ಇದ್ದವು. ಜೊತೆಗೆ ಭೂತಾನ್, ಶ್ರೀಲಂಕಾ ದೇಶಗಳ ಸಾಂಸ್ಕೃತಿಕ ತಂಡಗಳು ಕೂಡ ನುಡಿಸಿರಿಯ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ರಾಷ್ಟ್ರಗೀತೆ ಹಾಡಲೇಬೇಕು
ಬಹುತ್ವದ ಪರಿಕಲ್ಪನೆ ಕುರಿತು ಮಾತನಾಡುತ್ತಿದ್ದ ಸಂದರ್ಭದಲ್ಲಿ ಡಾ. ನಾಗತಿಹಳ್ಳಿ ಚಂದ್ರಶೇಖರ್ರವರು ರಾಷ್ಟ್ರಗೀತೆ ಹಾಡುವುದನ್ನು ಬೆಂಬಲಿಸಿದರು.ನಮ್ಮ ನಾಡಗೀತೆ, ರಾಷ್ಟ್ರಗೀತೆಗಳು ಬಹುತ್ವವನ್ನು ಪ್ರತಿಬಿಂಬಿಸುತ್ತವೆ. ಅವುಗಳು ಸಾಹಿತ್ಯಾತ್ಮಕವಾಗಿ ಶ್ರೀಮಂತವಾದವುಗಳು. ಈ ಗೀತೆಗಳನ್ನು ಹಾಡಿದಾಗ ಮಾತ್ರ ಛಂದೋಬದ್ಧತೆ, ಶ್ರುತಿ, ಲಯ, ತಾಳಗಳ ಸಾರ ನಮಗೆ ಅರ್ಥವಾಗುತ್ತದೆ. ಆದ್ದರಿಂದ ಶಾಹಿತ್ಯದ ವಿದ್ಯಾರ್ಥಿಗಳಾಗಿ ರಾಷ್ಟ್ರಗೀತೆಯನ್ನು ಹಾಡಬೇಕು ಎಂದರು.