ಮಂಗಳೂರು : ಪೊಲೀಸ್ ಕಮಿಷನರೇಟ್ ನ ಮಂಗಳೂರು ದಕ್ಷಿಣ ಉಪ ವಿಭಾಗ ಕಚೇರಿಯನ್ನು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಗುರುವಾರ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಮಂಗಳೂರು ದಕ್ಷಿಣ ಉಪವಿಭಾಗ ವ್ಯಾಪ್ತಿಗೆ ಪಾಂಡೇಶ್ವರ, ಗ್ರಾಮಾಂತರ, ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣೆಗಳು ಬರುತ್ತವೆ. ಸೆಂಟ್ರಲ್ ಉಪ ವಿಭಾಗದಲ್ಲಿ ಬಂದರು, ಬರ್ಕೆ, ಉರ್ವ, ಕದ್ರಿ, ಮಹಿಳಾ ಪೊಲೀಸ್ ಠಾಣೆ ಹಾಗೂ ಉತ್ತರ (ಪಣಂಬೂರು) ಉಪವಿಭಾಗ ವ್ಯಾಪ್ತಿಯಲ್ಲಿ ಪಣಂಬೂರು, ಕಾವೂರು, ಸುರತ್ಕಲ್, ಮೂಲ್ಕಿ, ಬಜಪೆ, ಮೂಡಬಿದಿರೆ ಎಂಬ 6 ಪೊಲೀಸ್ ಠಾಣೆಗಳು ಬರುತ್ತವೆ.
ದಕ್ಷಿಣ ಉಪ ವಿಭಾಗದಲ್ಲಿ ಕೇವಲ 4 ಪೊಲೀಸ್ ಠಾಣೆಗಳು ಮಾತ್ರ ಬರುತ್ತವೆಯಾದರೂ ಈ ನಾಲ್ಕೂ ಠಾಣೆಗಳು ಪ್ರಮುಖವಾಗಿವೆ ಎಂದು ಅಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದರು.
ಉಪ ವಿಭಾಗದ ನೂತನ ಹಾಗೂ ಪ್ರಥಮ ಎ.ಸಿ.ಪಿ. ಟಿ.ಆರ್. ಜಗನ್ನಾಥ್ ಅವರು ಉಪ ವಿಭಾಗ ಕಚೇರಿ ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.
ಡಿ.ಸಿ.ಪಿ.ಗಳಾದ ಎಂ. ಮುತ್ತೂರಾಯ (ಕಾನೂನು ಸುವ್ಯವಸ್ಥೆ), ಡಿ. ಧರ್ಮಯ್ಯ (ಅಪರಾಧ ಮತ್ತು ಸಂಚಾರ), ಪಾರ ಶೆಟ್ಟಿ (ಸಿ.ಎ.ಆರ್.) ಮತ್ತು ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಟಿ.ಆರ್. ಜಗನ್ನಾಥ್ ಸ್ವಾಗತಿಸಿ ಪಾಂಡೇಶ್ವರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ತಿಲಕ್ ಚಂದ್ರ ವಂದಿಸಿದರು