[1]ಮಂಗಳೂರು: ನೇತ್ರಾವತಿ ಸೇತುವೆ ನದಿ ತೀರದಿಂದ ಕಣ್ಣೂರು ಮಸೀದಿಯವರೆಗೆ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪರ್ಯಾಯ ಹೆದ್ದಾರಿ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜೆ. ಆರ್. ಲೋಬೋ ಹೇಳಿದರು.
ಇಲ್ಲಿ 50 ಮೀ. ಅಗಲದ ಚತುಷ್ಪಥ ಅಗತ್ಯವಿದೆ. ಇದರಿಂದ ಪ್ರವಾಸೋದ್ಯ ಮಕ್ಕೂ ಒತ್ತು ಸಿಗಲಿದ್ದು, ಮಂಗಳೂರಿನ ಬೆಳವಣಿಗೆಗೂ ಪೂರಕ ಎಂದರು. ಯಾವುದೇ ಮನೆ ತೆರವು ಮಾಡದೆ ಯಾವ ರೀತಿಯಲ್ಲಿ ರಸ್ತೆ ನಿರ್ಮಿಸಲು ಸಾಧ್ಯ ಎಂಬ ಬಗ್ಗೆ ಸರ್ವೆ ಮಾಡಬೇಕು. ಸಾಧ್ಯವಿದ್ದಷ್ಟು ನದಿಗೆ ಸೇರಿಕೊಂಡಿರುವ ಭೂಮಿಯನ್ನೇ ಬಳಸಿ ರಸ್ತೆ ನಿರ್ಮಿಸಲು ಪ್ರಯತ್ನಿಸಬೇಕು ಎಂದು ಅವರು ಸೂಚಿಸಿದರು.
ಇಲ್ಲಿ ಬಹುಪಾಲು ಜನರ ಭೂಮಿಯನ್ನು ನದಿ ಒಳಗೊಂಡಿದೆ. ತೋರಿಕೆಗೆ ಈ ಭೂಮಿ ಈಗ ನದಿಯ ಮಡಿಲು ಸೇರಿದ್ದರೂ ಇದನ್ನು ಸಮಚಿತ್ತದಿಂದ ಸರ್ವೆ ಮಾಡಬೇಕಿದೆ. ಇಲ್ಲಿ ರಸ್ತೆ ನಿರ್ಮಾಣವಾದರೆ ಅದರ ಪ್ರಯೋಜನ ಆಸುಪಾಸಿನ ಜನರಿಗೆ ಸಿಗಬೇಕು ಎಂದು ಶಾಸಕರು ವಿವರಿಸಿದರು. ಈ ರಸ್ತೆ ನಿರ್ಮಾಣವಾದರೆ ಕೇರಳ – ಕರ್ನಾಟಕದ ಬೆಂಗಳೂರು ಹೆದ್ದಾರಿಯನ್ನು ಜೋಡಿಸಲು ನೆರವಾಗುತ್ತದೆ. ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದರು.