[1]ಮಂಗಳೂರು : ದ.ಕ ಜಿಲ್ಲೆಯ ಗ್ರಾಮ ಪಂಚಾಯತ್ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯು ಡಿಸೆಂಬರ್ 17 ರಂದು ನಡೆಯಲಿದೆ. ಮಂಗಳೂರು ತಾಲೂಕಿನ ಮಲ್ಲೂರು ಮತ್ತು ಪಾವೂರು ಗ್ರಾ.ಪ, ಬಂಟ್ವಾಳ ತಾಲೂಕಿನ ಮಂಚಿ ಗ್ರಾ.ಪ ಹಾಗೂ ಪುತ್ತೂರು ತಾಲೂಕಿನ ಕೊಯಿಲ ಗ್ರಾಮ ಪಂಚಾಯತ್ಗಳಲ್ಲಿ ಚುನಾವಣೆ ನಡೆಯಲಿರುವುದು.
ಈ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತ ನಿಷ್ಪಕ್ಷಪಾತದಿಂದ ಮತ್ತು ಶಾಂತಿಯುತ ವಾತಾವರಣದಲ್ಲಿ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿರುವುದರಿಂದ ದ.ಕ ಜಿಲ್ಲೆಯಲ್ಲಿ ಡಿಸೆಂಬರ್ 16 ರ ಬೆಳಿಗ್ಗೆಯಿಂದ ಡಿಸೆಂಬರ್ 17 ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಮದ್ಯದಂಗಡಿಗಳನ್ನು ಮುಚ್ಚಲು ದ.ಕ ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್, ಐ.ಎ.ಎಸ್. ಆದೇಶಿಸಿದ್ದಾರೆ.
ಮತ ಎಣಿಕೆಯು ಡಿಸೆಂಬರ್ 20 ರಂದು ನಡೆಯಲಿದ್ದು ಅಂದು ಕೂಡ ಬೆಳಿಗ್ಗೆ 6 ರಿಂದ ರಾತ್ರಿ 8 ಗಂಟೆಯ ವರಗೆ ಮದ್ಯ ಮಾರಾಟವನ್ನು ನಿಷೇಧಿಸಿದೆ. ಅಗತ್ಯವಿದ್ದಲ್ಲಿ ಮರು ಚುನಾವಣೆಯು ಡಿಸೆಂಬರ್ 19 ರಂದು ನಡೆಯಲಿರುವುದು ಎಂದು ಜಿಲ್ಲಾಧಿಕಾರಿಯವರ ಪ್ರಕಟಣೆ ತಿಳಿಸಿದೆ.