[1]ಮಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆ ಬಿರುಸುಗೊಂಡಿವೆ.ಒಂದೆಡೆ ರಥಯಾತ್ರೆಗಳು ಆರಂಭವಾದರೆ ಇನ್ನೊಂಡೆದಡೆ ಪಾದಯಾತ್ರೆಗಳಿಗೆ ಚಾಲನೆ ನೀಡಲಾಗಿದೆ.ಈ ನಡುವೆ ದಕ್ಷಿಣಕನ್ನಡ ಜಿಲ್ಲೆಯ ಎತ್ತಿನಹೊಳೆ ಯೋಜನೆ ಹೋರಾಟ ಮುಂಬರು ಚುನಾವಣೆಯ ಪ್ರಮುಖ ವಿಷಯವಾಗಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳು ಆರಂಭಗೊಂಡಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಗೆ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರು ದುಮುಕಲು ಮುಂದಾಗಿದ್ದಾರೆ.ಬಯಲು ಸೀಮೆಗೆ ನೀರುಣಿಸುವ ಉದ್ದೇಶಹೊಂದಿರುವ ಎತ್ತಿನಹೊಳೆ ಯೋಜನೆ ವಿವಾದದ ಮೂಲ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಎತ್ತಿನಹೊಳೆ ಹೋರಾಟಗಾರರು ಚುನಾವಣೆಗೆ ಸ್ಪರ್ದಿಸಲು ಮುಂದಾಗಿದ್ದಾರೆ.
ಕರಾವಳಿಯನ್ನೇ ಬರಡಾಗಿಸುವ ಎತ್ತಿನಹೊಳೆ ಯೋಜನೆ ವಿರುದ್ಧ ಹಲವಾರು ಹೋರಾಟಗಳು,ಪಾದಯಾತ್ರೆಗಳು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆ ಬಂದ್ ಕೂಡ ನಡೆಯಿತು.
[2]ಆದರೆ ಈ ಹೋರಾಟಗಳಿಗೆ ರಾಜ್ಯ ಸರಕಾರ ಮಣಿಯಲಿಲ್ಲ .ಈ ಹಿನ್ನೆಲೆಯಲ್ಲಿ ಹೋರಾಟಗಾರರು ಚುನಾವಣೆಯ ಮೂಲಕ ಸರಕಾರಕ್ಕೆ ಉತ್ತರ ನೀಡಲು ಹೊರಟಿದ್ದಾರೆ.ಎತ್ತಿನಹೊಳೆ ಯೋಜನೆ ಜಾರಿಗೆ ಕಾರಣಕರ್ತರಾಗುತ್ತಿರುವ ಜನಪ್ರತಿನಿಧಿಗಳ ನಿರ್ಲಕ್ಷತನಕ್ಕೆ ಸೆಡ್ಡುಹೊಡೆಯಲು ಹೋರಾಟಗಾರರು ಮುಂದಾಗಿದ್ದಾರೆ. ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರು ಮುಂಬರುವ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ನೇತ್ರಾವತಿ ಪಕ್ಷೇತರ ಅಭ್ಯರ್ಥಿ ಹೆಸರಿನಲ್ಲಿ ಮತದಾರರ ಬಳಿ ತೆರಳಲು ಹೋರಾಟಗಾರರು ನಿರ್ಧರಿಸಿದ್ದಾರೆ. ಎತ್ತಿನಹೊಳೆ ಪರವಾಗಿ ವಕಾಲತ್ತು ಮಾಡುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹಾಗು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ವಿರುದ್ದ ಕಣಕ್ಕಿಳಿಯಲು ಹೋರಾಟಗಾರರು ಚಿಂತನೆ ನಡೆಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಬಗ್ಗೆ ಜನವರಿಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲು ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಎತ್ತಿನಹೊಳೆ ಯೋಜನೆ ಕೆಲ ಜನಪ್ರತಿನಿಧಿಗಳಿಗೆ ಮಗ್ಗುಲ ಮುಳ್ಳಾಗುವ ಸಾದ್ಯತೆ ದಟ್ಟವಾಗಿದೆ.