[1]ಮಂಗಳೂರು: ಓಖಿ ಚಂಡಮಾರುತದಿಂದ ಹಾನಿಗೊಳಗಾದ ಲಕ್ಷದ್ವೀಪದ ಪ್ರದೇಶಗಳನ್ನು ಪರಿಶೀಲಿಸುವ ಸಲುವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಕೇಂದ್ರ ವಿಮಾನಯಾನ ರಾಜ್ಯ ಸಚಿವ ಪಿ. ರಾಧಾಕೃಷ್ಣನ್, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಶಾಸಕ ಎಸ್. ಅಂಗಾರ, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮೋದಿ ಅವರನ್ನು ಸ್ವಾಗತಿಸಿದರು. ಬಂಟ್ವಾಳ ಚಿಲಿಪಿಲಿ ತಂಡದಿಂದ ಚೆಂಡೆ, ಕೊಂಬು, ಕಹಳೆ, ಗೊಂಬೆಯಾಟಗಳ ಮಧ್ಯೆ ಕಾರ್ಯಕರ್ತರು ಪಕ್ಷದ ಧ್ವಜವನ್ನು ಹಾರಿಸಿ ಸಂಭ್ರಮಿಸಿದರು.
[2]ಅದಾದ ಬಳಿಕ ಸುಮಾರು 12.30ರ ಹೊತ್ತಿಗೆ ವಿಶೇಷ ವಾಹನದಲ್ಲಿ ಹೊರಗೆ ಬಂದ ಮೋದಿಯವರು ಜನಸ್ತೋಮ ಕಂಡು ವಾಹನ ನಿಲ್ಲಿಸಿ ಅಲ್ಲಿಂದಲೇ ಅಭಿಮಾನಿಗಳತ್ತ ಕೈಬೀಸಿದರು. ಸುತ್ತ ನೆರೆದಿರುವ ಪೊಲೀಸರನ್ನು ಲೆಕ್ಕಿಸದೆ ಅಭಿಮಾನಿಗಳು ಬ್ಯಾರಿಕೇಡ್ ತಳ್ಳಿ ಮೋದಿಯವರ ಬಳಿ ಬರಲು ವಿಫಲ ಯತ್ನ ನಡೆಸಿದರು. ಬಳಿಕ ಕಾರಿನಿಂದಿಳಿದ ಮೋದಿ ತಾವೇ ಅಭಿಮಾನಿಗಳತ್ತ ಬಂದರು. ದೇಶದ ನಾಯಕ ತಮ್ಮತ್ತ ಬರುತ್ತಿದ್ದಂತೆ ಮೋದಿ ಮೋದಿ ಎಂಬ ಘೋಷಣೆ ಮಾತ್ರವೇ ಇಡೀ ವಿಮಾನ ನಿಲ್ದಾಣದ ಸುತ್ತ ಕೇಳಿ ಬಂತು.
ಇಂದು ಬೆಳಗ್ಗೆ 7.30ಕ್ಕೆ ಮತ್ತೆ ಮಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಲಕ್ಷದ್ವೀಪಕ್ಕೆ ತೆರಳಲಿದ್ದಾರೆ.