[1]ಮಂಗಳೂರು: ನಗರದ ರಾವ್ ಆ್ಯಂಡ್ ವೃತ್ತದ ಬಳಿ ದುಷ್ಕರ್ಮಿಗಳ ತಂಡವೊಂದು ನಾಲ್ವರ ಮೇಲೆ ತಲವಾರ್ನಿಂದ ಮಾರಣಾಂತಿಕ ಹಲ್ಲೆ ನಡೆಸಿದೆ.
ಹಲ್ಲೆಯಿಂದ ಒಬ್ಬನ ತಲೆಗೆ ಬಲವಾದ ಏಟು ಬಿದ್ದಿದ್ದು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಉಳಿದ ಮೂವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಶಫೀಕ್ (45), ಅನೀಸ್ (22), ಹಫೀಝ್ (22) ಹಾಗೂ ಪಕ್ಕದ ಪಾನ್ ಅಂಗಡಿಯ ಮಾಲೀಕ ಗಾಯಗೊಂಡಿದ್ದಾರೆ.
ಹರ್ಷ ಬಾರ್ ಬಳಿ ನಿಂತಿದ್ದ ಶಫೀಕ್ ಮೇಲೆ ಮೂವರ ತಂಡವೊಂದು ಏಕಾಏಕಿ ಬಂದು ತಲವಾರ್ನಿಂದ ಹಲ್ಲೆ ನಡೆಸಿದೆ. ಆಗ ಇದೇ ಸಮಯಕ್ಕೆ ಪಾಂಡೇಶ್ವರ ಕಡೆಗೆ ಹೋಗುತ್ತಿದ್ದ ಅನೀಸ್ ಗಲಾಟೆ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಅನೀಸ್ ಅವರ ಮೇಲೆಯೂ ಹಲ್ಲೆ ನಡೆದಿದೆ.
ಜೊತೆಗೆ ಆತನ ಜೊತೆಗಿದ್ದ ಹಫೀಝ್ ಹಾಗೂ ಪಾನ್ ಅಂಗಡಿಯ ಮಾಲೀಕನ ಮೇಲೆಯೂ ದುಷ್ಕರ್ಮಿಗಳ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.