[1]ಮಂಗಳೂರು: ಮುಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಮೂಲ್ಕಿಯ ಅಂಗಾರಗುಡ್ಡೆ ಎಂಬಲ್ಲಿ ಕಳೆದ ಕೆಲ ತಿಂಗಳಿನಿಂದ ಬಿಜೆಪಿಯ ಎರಡು ಬಣಗಳ ನಡುವಿನ ಭಿನ್ನಮತ ಪರಾಕಾಷ್ಠೆಗೇರಿದೆ. ಗುಜರಾತ್-ಹಿಮಾಚಲ ಪ್ರದೇಶ ಚುನಾವಣೆಯ ಗೆಲುವನ್ನೂ ಪ್ರತ್ಯೇಕವಾಗಿ ಆಚರಿಸಿಕೊಂಡಿದ್ದಾರೆ.
ಚುನಾವಣೆಯ ಮತ ಎಣಿಕೆ ಮುಗಿಯುವ ಮುನ್ನವೇ ಒಂದು ಬಣ ಕಿಲ್ಪಾಡಿ ಪಂಚಾಯತಿ ಮಾಜಿ ಆಧ್ಯಕ್ಷರ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದ್ದರೆ ಇನ್ನೊಂದು ಬಣ ಅತಿಕಾರಿಬೆಟ್ಟು ಗ್ರಾ.ಪಂ. ಸದಸ್ಯ ಜೀವನ್ ಶೆಟ್ಟಿ ನೇತೃತ್ವದಲ್ಲಿ ಅಂಗರಗುಡ್ಡೆಯಲ್ಲಿ ವಿಜಯೋತ್ಸವ ಆಚರಿಸಿ ಬಿಜೆಪಿ ವರಿಷ್ಠರಿಗೆ ಸೆಡ್ಡು ಹೊಡೆದಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆಯೂ ಅಂಗಾರಗುಡ್ಡೆಯಲ್ಲಿ ಸ್ವಚ್ಛತಾ ಆಂದೊಲನದ ಬಗ್ಗೆ ಸ್ಥಳೀಯ ಎರಡು ಬಣಗಳ ನಡುವೆ ಉಂಟಾದ ಬಿನ್ನಾಭಿಪ್ರಾಯ ಮುಂದುವರಿಯುತ್ತಲೇ ಇದೆ. ಬಡವರಿಗೆ ಅಕ್ಕಿ ವಿತರಣೆಯಲ್ಲೂ ಎರಡು ಬಣಗಳ ನಡುವೆ ಪೈಪೋಟಿ ನಡೆಯಿತು. ಹೀಗೆ ಇಲ್ಲಿನ ಪ್ರತೀ ರಾಜಕೀಯ ಕಾರ್ಯಗಳಲ್ಲಿ ಗುಂಪುಗಾರಿಕೆ ಎದ್ದುಕಾಣುತ್ತಿತ್ತು. ಇದರಿಂದ ವರಿಷ್ಠರೂ ಮುಜುಗರಪಟ್ಟುಕೊಳ್ಳುವಂತಾಯಿತು.
ಒಂದೆಡೆ ಗುಜರಾತ್ ಚುನಾವಣೆ ಮತ ಎಣಿಕೆ ಪೂರ್ಣಗೊಳ್ಳುವ ಮುನ್ನವೇ ಒಂದು ಬಣ ವಿಜಯೋತ್ಸವ ಆಚರಿಸಿಕೊಂಡರೆ, ಇನ್ನೊಂದು ಬಣ ಎಲ್ಲವೂ ಮುಗಿದ ಮೇಲೆ ವಿಜಯೋತ್ಸವ ಆಚರಿಸಿದೆ.