[1]ಮಂಗಳೂರು: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ, ಕೊಲೆ ಮಾಡಿದ ಆರೋಪದಲ್ಲಿ ಬಂಧನವಾಗಿದ್ದ ಕನ್ಯಾನ ಕಾಂಚಾರು ನಿವಾಸಿ ದೇವಿಪ್ರಸಾದ್ (43) ಎಂಬಾತನಿಗೆ ಮಂಗಳೂರು ಆರನೇ ಹೆಚ್ಚುವರಿ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸದ ನಿವಾಸಿ ಸವಿತಾ ಎಂಬುವರನ್ನು ದೇವಿಪ್ರಸಾದ್ 2013ರಲ್ಲಿ ಮದುವೆಯಾಗಿದ್ದ. ಬಳಿಕ ವರದಕ್ಷಿಣೆಗಾಗಿ ವಿಪರೀತ ಪೀಡಿಸುತ್ತಿದ್ದ. ಅಲ್ಲದೆ, ಸವಿತಾಳ ಮೇಲೆ ಹಲ್ಲೆ ಮಾಡುತ್ತಿದ್ದ.
2014ರಲ್ಲಿ ದೇವಿಪ್ರಸಾದ್ ಪತ್ನಿಗೆ ನೇಣು ಹಾಕಿ ಕೊಲೆ ಮಾಡಿರುವುದಾಗಿ ಅಂದಿನ ಡಿವೈಎಸ್ಪಿ ರಶ್ಮಿ ಪರಡ್ಡಿ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ಸರ್ಕಾರದ ಪರವಾಗಿ ವಕೀಲ ಜ್ಯುಡಿತ್ ವಾದ ಮಂಡಿಸಿದ್ದರು.
ಇದೀಗ ಆರೋಪಿ ದೇವಿಪ್ರಸಾದ್ಗೆ ಮಂಗಳೂರು ಆರನೇ ಹೆಚ್ಚುವರಿ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.