[1]ಮಂಗಳೂರು: ವನ್ಯಜೀವಿ ಸಂಶೋಧನಾ ತಜ್ಞ ಡಾ. ಉಲ್ಲಾಸ್ ಕಾರಂತರು ಮಂಗಳೂರಿಗೆ ಬಂದಾಗ ಓಡಾಟಕ್ಕೆ ಬಳಸುತ್ತಿದ್ದ ಕಾರು ನಗರದ ಬೆಸೆಂಟ್ ಜಂಕ್ಷನ್ ಬಳಿ ಗುರುವಾರ ಬೆಂಕಿ ತಗುಲಿ ಭಾಗಶಃ ಸುಟ್ಟುಹೋಗಿದೆ. ಕಾರಿನ ಚಾಲಕ ರಘುರಾಮ್ ಅಪಾಯದಿಂದ ಪಾರಾಗಿದ್ದಾರೆ.
ಇದು ಬೆಂಗಳೂರಿನಲ್ಲಿರುವ ಡಾ. ಶಿವರಾಮ ಕಾರಂತರ ಪುತ್ರ ಉಲ್ಲಾಸ್ ಕಾರಂತರ ಮಾಲೀಕತ್ವದ ಕಾರು ಇದಾಗಿದೆ. ಉಲ್ಲಾಸ್ ಕಾರಂತರು ಮಂಗಳೂರಿಗೆ ಬಂದಾಗಲೆಲ್ಲಾ ಓಡಾಟಕ್ಕೆ ಈ ಕಾರನ್ನು ಉಪಯೋಗಿಸುತ್ತಿದ್ದರು. ಚಾಲಕ ರಘುರಾಮ್ ಅವರು ಕಾರಂತರ ಮನೆತನಕ್ಕೆ ಸೇರಿದವರಾಗಿದ್ದು, ಮಂಗಳೂರಿನ ಬೆಸೆಂಟ್ ಕಾಲೇಜು ಸಮೀಪ ಪಿವಿಎಸ್ ಕಲಾಕುಂಜ ರಸ್ತೆಯಲ್ಲಿ ಅವರ ಮನೆ ಇದೆ.
ಗುರುವಾರ ಮಧ್ಯಾಹ್ನ ರಘುರಾಮ್ ಅವರು ಮನೆಯಿಂದ ಹೊರಟು ಕಾರನ್ನು ಚಲಾಯಿಸಿಕೊಂಡು 200 ಮೀ. ದೂರ ತಲುಪುವಷ್ಟರಲ್ಲಿ ಮುಂಭಾಗದ ಬೋನೆಟ್ನಲ್ಲಿ ಹೊಗೆಯಾಡುತ್ತಿರುವುದು ಕಂಡು ಬಂದಿತ್ತು. ಕೂಡಲೇ ಕಾರು ನಿಲ್ಲಿಸಿ ನೋಡಿದಾಗ ಬೆಂಕಿ ಹತ್ತಿಕೊಂಡಿರುವುದು ಕಂಡುಬಂದಿತ್ತು. ಬಳಿಕ ಸಮೀಪದಲ್ಲಿದ್ದ ಆಟೋ ರಿಕ್ಷಾ ಚಾಲಕರ ಸಹಾಯದಿಂದ ನೀರು ಚಿಮುಕಿಲಾಯಿತು.
ಬೆಂಕಿ ಶಮನವಾಗದೆ ಇದ್ದಾಗ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಲಾಯಿತು. ಪಾಂಡೇಶ್ವರದ ಅಗ್ನಿ ಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು. ಕಾರಿನ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದೆ. ಸುಮಾರು 1 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ರಘುರಾಮ್ ಕದ್ರಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.