ಬೆಂಗಳೂರು : ಎಚ್ ಡಿ ಕುಮಾರ ಸ್ವಾಮಿ ದಂಪತಿಗಳಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಜಂತಕಲ್ ಮೈನಿಂಗ್ ಕಂಪೆನಿ ಗುತ್ತಿಗೆ ಲೈಸನ್ಸ್ ನವೀಕರಣ ಹಾಗೂ ವಿಶ್ವಭಾರತಿ ಸೊಸೈಟಿ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧ ನಿರೀಕ್ಷಣಾ ಜಾಮೀನು ನೀಡಬೇಕೆಂದು ಕುಮಾರ ಸ್ವಾಮಿ ದಂಪತಿಗಳು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಎಚ್ಡಿಕೆ ದಂಪತಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಬುಧವಾರ ಬೆಳಗ್ಗೆ 11ಕ್ಕೆ ತೀರ್ಪು ಪ್ರಕಟಗೊಳ್ಳುವ ನಿರೀಕ್ಷೆಯಿತ್ತು. ಆದರೆ, ಸುಮಾರು ಒಂದೂವರೆ ಗಂಟೆ ವಿಳಂಬವಾದರೂ ಎಚ್ಡಿಕೆ ಪರ ತೀರ್ಪು ಹೊರಬಿದ್ದಿದೆ.
ನ್ಯಾಯಮೂರ್ತಿ ಕೆಎನ್ ಕೇಶವ ನಾರಾಯಣ ಅವರು ಎಚ್ಡಿಕೆ ದಂಪತಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುವುದರಿಂದಲೂ ವಿನಾಯ್ತಿ ನೀಡಿದ್ದಾರೆ.
ಎಚ್ಡಿಕೆ ದಂಪತಿಗಳು ಶುಕ್ರವಾರ(ಸೆ.9)ದಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ನ್ಯಾಯಮೂರ್ತಿ ಸುಧೀಂದ್ರ ರಾವ್ ಅವರು ಆದೇಶಿಸಿದ್ದರು.
ಒಂದು ವೇಳೆ ಹೈಕೋರ್ಟ್ ತೀರ್ಪು ಎಚ್ಡಿಕೆ ದಂಪತಿಗೆ ವಿರುದ್ಧವಾಗಿ ಬಂದಿದ್ದರೆ ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವುದು ಅಥವಾ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ ಇತ್ತು.
ಜಾಮೀನು ಪಡೆದರೂ ಸಂಜೆ ಇನ್ನೊಂದು ಪ್ರಕರಣ ಕುತೂಹಲ ಕೆರಳಿಸಿದೆ. ಮೇಲ್ಕಂಡ ಇಡೀ ಪ್ರಕರಣವನ್ನು ರದ್ದುಗೊಳಿಸುವಂತೆ ಸಲ್ಲಿಸಿರುವ ಅರ್ಜಿ ವಿಚಾರಣೆ ಮುಗಿದಿದ್ದು, ಗುರುವಾರ ಸಂಜೆ ವೇಳೆ ತೀರ್ಪು ಹೊರ ಬೀಳುವ ಸಾಧ್ಯತೆಯಿದೆ.