ಮಂಗಳೂರು : ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮದಿನವನ್ನು ಸೆ. 8, ಗುರುವಾರ ಕ್ರೈಸ್ತರು ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಕಾಸರಗೋಡು ಜಿಲ್ಲೆಯಾದ್ಯಂತ ಕ್ರೈಸ್ತ ದೇವಾಲಯಗಳಲ್ಲಿ ಸಂಭ್ರಮೋಲ್ಲಾಸದಿಂದ ಆಚರಿಸಿದರು.
ಕರಾವಳಿ ಜಿಲ್ಲೆಗಳಲ್ಲಿ ಮೇರಿ ಮಾತೆಯ ಜನ್ಮದಿನವನ್ನು ಮೊಂತಿ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ. ‘ದೇವ ಮಾತೆ’ ಮೇರಿ ಮಾತೆ ಪವಾಡಗಳನ್ನು ಸೃಷ್ಟಿಸುತ್ತಾರೆ ಎನ್ನುವುದು ಕ್ಯಾಥೋಲಿಕರ ನಂಬಿಕೆ. ಕ್ರೈಸ್ತರು ಈ ದಿನವನ್ನು ಹೊಸ ಬೆಳೆಯ ಹಬ್ಬ ಎಂದು ಕರೆಯುತ್ತಾರೆ.
ಬಾಲೆ ಮೇರಿಗೆ ನಮಿಸುವುದರ ಜತೆಗೆ ಹೊಸ ಭತ್ತದ ತೆನೆಯನ್ನು ಕ್ರೈಸ್ತ ದೇವಾಲಯಕ್ಕೆ ಮೆರವಣಿಗೆಯಲ್ಲಿ ತಂದು ಅಲ್ಲಿ ಅದರ ಆಶೀರ್ವಚನವನ್ನು ನೆರವೇರಿಸಿ ಈ ವರ್ಷ ಉತ್ತಮ ಫಸಲು ಒದಗಿಸಿದ್ದಾಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಬಲಿ ಪೂಜೆಯನ್ನು ನೀಡುತ್ತಾರೆ.
ಮಂಗಳೂರು ಸೇರಿದಂತೆ ಮೂರು ಜಿಲ್ಲೆಗಳಲ್ಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕ್ರೈಸ್ತ ಸಮುದಾಯ ಮೇರಿ ಮಾತೆಗೆ ಹೂವುಗಳನ್ನು ಅರ್ಪಿಸಿ ಭಕ್ತಿಯಿಂದ ನಮನ ಸಲ್ಲಿಸಿದರು. ದೇವಾಲಯದಲ್ಲಿ ಶ್ರದ್ಧೆ ಮತ್ತು ಭಕ್ತಿಪೂರ್ವಕ ಧಾರ್ಮಿಕ ಕಾರ್ಯಕ್ರಮಗಳು ಮುಗಿದ ಬಳಿಕ ಭತ್ತದ ತೆನೆಯನ್ನು ಮನೆಗೆ ತರಲಾಯಿತು. ಮಧ್ಯಾಹ್ನ ಕುಟುಂಬಿಕರು ಸಸ್ಯಾಹಾರಿ ಸಹ ಭೋಜನದಲ್ಲಿ ಭಾಗಿಯಾದರು.