[1]ಮಂಗಳೂರು: ರಾಜ್ಯ ಸರ್ಕಾರದ ಬಗ್ಗೆ ಮಾತನಾಡಲು ಯಾವುದೇ ವಿಚಾರ ಸಿಗದ ಹಿನ್ನೆಲೆಯಲ್ಲಿ ಬಿಜೆಪಿಯವರು ಈಗ ಅನ್ನಭಾಗ್ಯ ವನ್ನು ನಮ್ಮ ಭಾಗ್ಯ ಎನ್ನುತ್ತಿದ್ದಾರೆ ಎಂದು ಆಹಾರ ಸಚಿವ ಯು.ಟಿ.ಖಾದರ್ ಟೀಕಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಕ್ಕಿಗೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿರುವುದು ನಿಜ. ಆಹಾರ ಭದ್ರತೆ ಕಾಯಿದೆ ಯನ್ನು ಯುಪಿಎ ಸರ್ಕಾರ ಜಾರಿಗೆ ತಂದ ನಂತರ ಕೇಂದ್ರದಿಂದ ಸಬ್ಸಿಡಿ ಕೊಡಲಾಗುತ್ತಿದೆ.
ಸಬ್ಸಿಡಿಯನ್ನು ಕೇವಲ ಕರ್ನಾಟಕಕ್ಕೆ ಮಾತ್ರ ಕೊಡುತ್ತಿಲ್ಲ. ಅದನ್ನು ಎಲ್ಲ ರಾಜ್ಯಗಳಿಗೂ ಕೊಡುತ್ತಿದೆ. ಎಲ್ಲ ರಾಜ್ಯಗಳಿಗೂ ಸಬ್ಸಿಡಿ ಕೊಟ್ಟರೂ ಸಹ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿರುವುದು ಕರ್ನಾಟಕದಲ್ಲಿ ಮಾತ್ರ.
ಬಿಜೆಪಿ ಆಡಳಿತ ನಡೆಸುತ್ತಿರುವ ಯಾವುದೇ ರಾಜ್ಯದಲ್ಲಿಯೂ ಈ ಯೋಜನೆ ಜಾರಿಯಲ್ಲಿಲ್ಲ. ಬಿಜೆಪಿಯವರಿಗೆ ರಾಜ್ಯ ಸರ್ಕಾರದ ಬಗ್ಗೆ ಮಾತನಾಡಲು ಯಾವುದೇ ಅಸ್ತ್ರವೂ ಇಲ್ಲ. ಅದಕ್ಕಾಗಿ ಚುನಾವಣೆ ಸಮೀಪಿಸಿದ ಕೂಡಲೆ ಅನ್ನಭಾಗ್ಯ ಯೋಜನೆಯನ್ನು ನಮ್ಮಭಾಗ್ಯ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದರು.