[1]ಮಂಗಳೂರು: ರಾಜ್ಯ ಸರ್ಕಾರದ ಮುಸ್ಲಿಂ ತುಷ್ಠೀಕರಣ ನೀತಿಯಿಂದ ಹಿಂದೂಗಳ ಹತ್ಯೆ ಹೆಚ್ಚುತ್ತಿದೆ. ಇದೀಗ ಕಾಟಿಪಳ್ಳದಲ್ಲಿ ದೀಪು ಯಾನೆ ದೀಪಕ್ ರಾವ್ ಹತ್ಯೆ ಕೂಡಾ ನಡೆದಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ದಿಲ್ಲಿಯಲ್ಲಿ ಸಂಸತ್ ಅಧಿವೇಶನದಲ್ಲಿರುವ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ಜಿಲ್ಲೆಯಲ್ಲಿ ನಡೆದ ಹತ್ಯೆ ಪ್ರಕರಣಗಳ ಆರೋಪಿಗಳನ್ನು ಬಂಧಿಸದೆ, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳದಿರುವುದರಿಂದಲೇ ಕೊಲೆಗಳು ಹೆಚ್ಚುತ್ತಿದೆ. ಸರ್ಕಾರದ ನಿರ್ಲಕ್ಷ್ಯ ಹಾಗೂ ಮುಸ್ಲಿಂ ತುಷ್ಠೀಕರಣದಿಂದ ಮತ್ತೊಂದು ಹೆಣ ಉರುಳಿದೆ.
ಹತ್ಯೆಯ ಹಿಂದೆ ಕಾಣದ ಕೈಗಳಿವೆ. ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಹಾಗೂ ದೀಪು ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ದೀಪು ಹತ್ಯೆ ಸೇರಿದಂತೆ ಈವರೆಗೆ ನಡೆದ ಹಿಂದೂಗಳ ಹತ್ಯೆ ಪ್ರಕರಣಗಳ ತನಿಖೆಯನ್ನು ಎನ್ಐಎಗೆ ನೀಡಬೇಕೆಂದೂ ಅವರು ಆಗ್ರಹಿಸಿದ್ದಾರೆ.