[1]ರಾಯಚೂರು: ಕರ್ನಾಟಕಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಂದು ಹೋದ ಬಳಿಕ ಕೋಮು ಗಲಭೆ ಆಗುತ್ತಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಇಲ್ಲಿ ಮಂಗಳವಾರ ಆರೋಪ ಮಾಡಿದರು.
ಅಮಿತ್ ಶಾ ಸೂಚನೆಯ ಪ್ರಕಾರವೇ ಬಿಜೆಪಿ ನಾಯಕರು ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕೂಡ ರೇವಣ್ಣ ಹೇಳಿದ್ದಾರೆ.
ಇಷ್ಟು ಕಾಲ ಸುಮ್ಮನಿದ್ದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ಬದಲಿಸುವ ಮಾತನಾಡುತ್ತಿದ್ದಾರೆ. ಹರಕು ಬಾಯಿಯ ಶೋಭಾ ಕರಂದ್ಲಾಜೆ, ಪ್ರತಾಪ ಸಿಂಹ ಹೀಗೆ ಅನೇಕರು ಪ್ರಚೋದನಕಾರಿಯಾದಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಯಾರೇ ಸತ್ತರೂ ಅವರು ಬಿಜೆಪಿ ಕಾರ್ಯಕರ್ತರು ಎಂದು ಬಿಂಬಿಸುತ್ತಿದ್ದಾರೆ. ನಾವೂ ಹಿಂದುಗಳೇ. ಆದರೆ ಮತ್ತೊಂದು ಸಮಾಜವನ್ನು ದ್ವೇಷಿಸುವ ಹಿಂದೂಗಳಲ್ಲ.
ಇನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಹತ್ವಾಕಾಂಕ್ಷೆ ಈಡೇರುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಚಿವ ಎಚ್.ಎಂ.ರೇವಣ್ಣ ಹೇಳಿದರು.