[1]ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಲಿದ್ದ ಭಾರೀ ಅವಘಡವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಪೈಲಟ್ ಸಮಯ ಪ್ರಜ್ಞೆಯಿಂದಾಗಿ ಅಪಘಾತ ತಪ್ಪಿದ್ದು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದ ರನ್ ವೇ ಸುತ್ತಲಿದ್ದ ಹುಲ್ಲು ತೆಗೆಯಲು ಟ್ರಾಕ್ಟರ್ ಕರೆಸಲಾಗಿತ್ತು. ಈ ಟ್ರಾಕ್ಟರನ್ನು ಅದರ ಚಾಲಕ ರನ್ ವೇ ಅಂತ್ಯದಲ್ಲಿ ನಿಲ್ಲಿಸಿದ್ದ.
ಇನ್ನೇನು ಮುಂಬೈಗೆ ಹೊರಬೇಕಿದ್ದ ಜೆಟ್ ಏರ್ ವೇಸ್ ವಿಮಾನ ಟೇಕ್ ಆಫ್ ಆಗುವುದರಲ್ಲಿತ್ತು. ಆದರೆ ಚಾಲಕನಿಗೆ ಟ್ರಾಕ್ಟರ್ ನಿಂತಿರುವುದು ತಿಳಿದಿರಲಿಲ್ಲ. ಆಗ ಈ ಟ್ರಾಕ್ಟರ್ ರನ್ ವೇ ಯಲ್ಲಿ ಇರುವುದನ್ನು ಏರ್ ಟ್ರಾಫಿಕ್ ಕಂಟ್ರೋಲರ್ ನೋಡಿದ್ದಾರೆ. ತಕ್ಷಣ ವಿಮಾನದ ಟೇಕಾಫ್ ನ್ನು ಅವರು ರದ್ದುಗೊಳಿಸಿದ್ದಾರೆ.
ಒಂದೊಮ್ಮೆ ವಿಮಾನ ಟೇಕಾಫ್ ಆಗಲು ಮುಂದುವರಿಯುತ್ತಿದ್ದಲ್ಲಿ ಟ್ರಾಕ್ಟರ್ ಗೆ ಗುದ್ದಿ ಭಾರೀ ಅವಘಡ ಸಂಭವಿಸಲಿತ್ತು. ಆದರೆ ಅದೃಷ್ಟಾವಶಾತ್ ಅಪಘಾತ ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಈ ಹಿಂದೆ 22ಮೇ 2010ರಲ್ಲಿ ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ರನ್ ವೇಯಿಂದ ಪ್ರಪಾತಕ್ಕೆ ಜಾರಿ 158 ಜನರು ಸಾವನ್ನಪ್ಪಿದ್ದರು. ಘಟನೆಯಲ್ಲಿ 8 ಜನ ಗಾಯಗೊಂಡಿದ್ದರು.