[1]ಮಂಗಳೂರು: ಕ್ರೈಸ್ತರ ಬೆಳವಣಿಗೆಯ ದೃಷ್ಟಿಯಿಂದ ಕೈಸ್ತ ಅಭಿವೃದ್ಧಿ ಪರಿಷತ್ಅನ್ನು ಕ್ರೈಸ್ತ ಅಭಿವೃದ್ಧಿ ನಿಗಮವಾಗಿ ಪರಿವರ್ತಿಸಬೇಕೆಂದು ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 2011ನೇ ಸಾಲಿನಲ್ಲಿ 50 ಕೋಟಿ ರೂ. ಅನುದಾನದಲ್ಲಿ ಪ್ರಾರಂಭಗೊಂಡ ಕ್ರೈಸ್ತ ಅಭಿವೃದ್ಧಿ ಪರಿಷತ್ಅನ್ನು ಕ್ರೈಸ್ತ ಅಭಿವೃದ್ಧಿ ನಿಗಮವನ್ನಾಗಿ ಘೋಷಿಸಬೇಕೆಂದು ಈಗಾಗಲೇ ಕ್ರೈಸ್ತ ಅಭಿವೃದ್ಧಿ ಪರಿಷತ್ ತೀರ್ಮಾನಿಸಿದೆ ಎಂದು ಹೇಳಿದರು.
ಮುಂಬರುವ 2018-19ನೆ ಸಾಲಿನ ಬಜೆಟ್ನಲ್ಲಿ ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನ ಒದಗಿಸಬೇಕೆಂದೂ ಅವರು ಮುಖ್ಯಮಂತ್ರಿ ಅವರನ್ನು ಆಗ್ರಹಿಸಿದರು.
2017-18 ನೇ ಸಾಲಿಗೆ 175 ಕೋಟಿ ರೂ.ಗಳನ್ನು ನೀಡಲಾಗಿತ್ತು. ನೀಡಿದ ಅನುದಾನವು ರಾಜ್ಯ ಅಲ್ಪಸಂಖ್ಯಾತರ ಇಲಾಖೆ ಮತ್ತು ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಅನುದಾನವನ್ನು ರಾಜ್ಯದಲ್ಲಿ ಶೇ. 4 ರಷ್ಟಿರುವ ಕ್ರೈಸ್ತ ಸಮುದಾಯದ ಆರ್ಹ ಫಲಾನುಭವಿಗಳಿಗೆ ಮೀಸಲಿಡಲಾಗಿದೆ ಎಂದು ಡಿಸೋಜಾ ತಿಳಿಸಿದರು.
ಒದಗಿಸಲಾದ 175 ಕೋಟಿ ರೂ.ಗೆ ಮೇಲಾಗಿ 300 ಕೋಟಿಯಷ್ಟು ಫಲಾನುಭವಿಯಾಗಲು ಅರ್ಹರಿರುವ ಅರ್ಜಿದಾರರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅನುದಾನದ ಕೊರತೆಯಿಂದ ಫಲಾನುಭವಿಗಳಿಗೆ ಹಣ ನೀಡಲು ಸಾದ್ಯವಾಗಿಲ್ಲ. ಈ ಹಿನ್ನೆಲೆ 2018-19 ನೇ ಸಾಲಿನಲ್ಲಿ ಮಂಡಿಸುವ ಬಜೆಟ್ನಲ್ಲಿ ಕನಿಷ್ಠ 500 ಕೋಟಿ ರೂ. ಅನುದಾನವನ್ನು ಘೋಷಿಸಬೇಕೆಂದು ಮುಖ್ಯಮಂತ್ರಿ ಅವರಿಗೆ ಬೇಡಿಕೆ ಸಲ್ಲಿಸಿರುವುದಾಗಿ ಅವರು ತಿಳಿಸಿದರು. ಈ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ಮುಖ್ಯಮಂತ್ರಿ ಅವರು ನೀಡಿದ್ದಾರೆಂದೂ ಅವರು ಸ್ಪಷ್ಟಪಡಿಸಿದರು.