[1]ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಅಥವಾ ಸುರತ್ಕಲ್ ಕೂಡಾ ಒಂದು. ಕೋಮು ಸೂಕ್ಷ್ಮ ಪ್ರದೇಶ ಎಂದೇ ಗುರುತಿಸಲಾಗುವ ಈ ಕ್ಷೇತ್ರ ಹಿಂದೆ ಬಿಜೆಪಿಯ ಭದ್ರಕೋಟೆಯಾಗಿತ್ತು.
ಆದರೆ ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಛಿದ್ರಗೊಳಿಸಿ ಕಾಂಗ್ರೆಸ್ ಇಲ್ಲಿ ವಿಜಯದ ನಗೆ ಬೀರಿತ್ತು. ಪ್ರಸ್ತುತ ಕಾಂಗ್ರೆಸ್ ನ ಮೊಯ್ದೀನ್ ಬಾವಾ ಇಲ್ಲಿನ ಶಾಸಕರು. ಮಂಗಳೂರು ಉತ್ತರ ಕ್ಷೇತ್ರಕ್ಕೆ ಬಂದರೆ ಯಾವತ್ತೂ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಿದ್ದಿಲ್ಲ.
ಹೀಗಾಗಿ ಇಲ್ಲಿ ಎನಿದ್ದರೂ ಕಾಂಗ್ರೆಸ್ ಹಾಗು ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ಪಡೆದುಕೊಳ್ಳಲು ಬಿಜೆಪಿ ನಾನಾ ರಣತಂತ್ರಗಳನ್ನು ಹೆಣೆಯುತ್ತಿದೆ. ಈ ಕ್ಷೇತ್ರದ ಬಿಜೆಪಿ ಸಾಂಭಾವ್ಯ ಅಭ್ಯರ್ಥಿ ಎಂದೇ ಬಿಂಬಿಸಲಾಗಿದ್ದ ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಅವರಿಗೆ ಈಗ ತಮ್ಮ ನಿಕಟವರ್ತಿಗಳಿಂದಲೇ ಪೈಪೋಟಿ ಎದುರಾಗಿದೆ. ಚುನಾವಣೆಗೆ ದಿನ ಹತ್ತಿರವಾಗುತ್ತಿದ್ದಂತೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.
[2]ಟಿಕೆಟ್ ಆಕಾಂಕ್ಷಿ ಪಾಲೆಮಾರ್ ಕಳೆದ ಬಾರಿ ಕಾಂಗ್ರೆಸ್ ನ ಮೊಯ್ದೀನ್ ಬಾವಾ ಅವರ ಎದುರು 5373 ಮತಗಳ ಅಂತರದಿಂದ ಪರಾಭವಗೊಂಡಿದ್ದ ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಸಹಜವಾಗಿಯೇ ಈ ಬಾರಿಯ ಟಿಕೆಟ್ ಆಕಾಂಕ್ಷಿಯಾಗಿದ್ದು ಈಗಾಗಲೇ ಕ್ಷೇತ್ರದಲ್ಲಿ ಜನ ಸಂಪರ್ಕ ಸಭೆಗಳನ್ನು ಆರಂಭಿಸಿದ್ದಾರೆ.
ಸ್ಥಳೀಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಸ್ವಪಕ್ಷೀಯರದ್ದೇ ಪಾಲೆಮಾರ್ ಗೆ ಚಿಂತೆ ಆದರೆ ಇತ್ತಿಚಿನ ಬೆಳವಣಿಗೆ ಕೃಷ್ಣ ಜೆ ಪಾಲೇಮಾರ್ ಅವರ ನಿದ್ದೆಗೆಡಿಸಿದೆ. ಬಿಜೆಪಿ ಉತ್ತರ ವಲಯದ ಅಧ್ಯಕ್ಷ ಡಾ.ಭರತ್ ಶೆಟ್ಟಿ, ಮೊಗವೀಯ ಸಮಾಜದ ಮುಖಂಡ ರಾಮಚಂದ್ರ ಬೈಕಂಪಾಡಿ, ಬಿಜೆಪಿ ಮುಖಂಡ ಸತ್ಯಜೀತ್ ಸುರತ್ಕಲ್ , ವಿಶ್ವ ಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವಾ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.
ರಾಜಶೇಖರಾನಂದ ಸ್ವಾಮೀಜಿ ಕಣಕ್ಕೆ? ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ನ ಮುಸ್ಲಿಂ ಅಭ್ಯರ್ಥಿ ಶಾಸಕ ಮೊಯ್ದೀನ್ ಬಾವ ವಿರುದ್ಧ ಪ್ರಖರ ಹಿಂದುತ್ವ ಪ್ರತಿಪಾದಕ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರನ್ನು ಕಣಕ್ಕಿಳಿಸಲು ಚಿಂತನೆ ಕೂಡಾ ನಡೆಯುತ್ತಿದೆ ಎಂದು ಹೇಳಲಾಗಿದೆ.
ದೀಪಕ್ ರಾವ್ ಪ್ರಕರಣದ ಸದ್ದು ಇತ್ತೀಚೆಗೆ ಈ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಹತ್ಯೆ ಪ್ರಕರಣ ಹಾಗೂ ಅದರ ನಂತರ ನಡೆದ ಬೆಳವಣಿಗೆಗಳು ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ.
ಈ ನಡುವೆ ಕಷ್ಣ ಜೆ ಪಾಲೇಮಾರ್ ಅವರನ್ನು ಕಣಕ್ಕಿಳಿಸಿದರೆ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣವನ್ನು ಕಾಂಗ್ರೆಸ್ ಮತ್ತೆ ಕೆದಕುವ ಆತಂಕವಿದೆ. ಒಟ್ಟಿನಲ್ಲಿ ಈ ಎಲ್ಲಾ ವಾದ ವಿವಾದ , ಚರ್ಚೆ , ವಿಮರ್ಶೆಗಳ ನಂತರ ಯಾರನ್ನು ಬಿಜೆಪಿ ಚುನಾವಣಾ ಅಖಾಡಾಕ್ಕೆ ಇಳಿಸಲಿದೆ ಎಂಬುದೇ ಕುತೂಹಲದ ವಿಚಾರವಾಗಿದೆ.