- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಾಂಗ್ರೆಸ್‌‌ನಿಂದ ಸಂಘಟನೆಗಳ ದುರುಪಯೋಗ: ಸುಲೋಚನಾ ಭಟ್‌

bjp-mangaluru [1]ಮಂಗಳೂರು: ಗೌರಿ ಲಂಕೇಶ್ ಜನ್ಮ ದಿನಾಚರಣೆ ಮಾಡುವುದು ಹಾಗೂ ಕನ್ನಡ ಸಂಘಟನೆಗಳನ್ನು ರಾಜ್ಯ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೀಗಳೆಯಲು ಬಳಕೆ ಮಾಡುತ್ತಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯ ಸಹ ವಕ್ತಾರೆ ಸುಲೋಚನಾ ಭಟ್ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗೌರಿ ಲಂಕೇಶ್ ಕಾರ್ಯಕ್ರಮದಲ್ಲಿ ಅವರ ಗುಣಗಾನ ಮಾಡುವುದು ಬಿಟ್ಟು, ಮೋದಿಯವರನ್ನು ದೂಷಿಸಲು ಬಳಸಿಕೊಳ್ಳಲಾಗಿದೆ. ಹತ್ಯೆ ನಡೆಸಿದವರನ್ನು ಬಂಧಿಸಲು ಸಾಧ್ಯವಾಗದ ರಾಜ್ಯ ಸರ್ಕಾರದ ಬಗ್ಗೆ ಚಕಾರ ಎತ್ತಿಲ್ಲ. ಹೀಗಾಗಿ ಇದು ರಾಜ್ಯ ಸರ್ಕಾದ ಪ್ರಾಯೋಜಿತ ಕಾರ್ಯಕ್ರಮ ಎಂಬ ಶಂಕೆ ಮೂಡಿದೆ.

ಅಲ್ಲಿ ಭಾಗವಹಿಸಿದ ದೊರೆಸ್ವಾಮಿಯವರಂತಹ ಹಿರಿಯರು ಕೂಡ ಮೋದಿ ನಿಂದನೆಗೆ ಮುಂದಾಗಿರುವುದು ಖೇದಕರ. ಇನ್ನು ಫೆ. 4ರಂದು ಪ್ರಧಾನಿ ಮೋದಿಯವರ ಬೆಂಗಳೂರು ಕಾರ್ಯಕ್ರಮವನ್ನು ಹಾಳುಗೆಡವಲು ರಾಜ್ಯ ಸರ್ಕಾರ ಪರೋಕ್ಷವಾಗಿ ತಂತ್ರಗಾರಿಕೆ ನಡೆಸುತ್ತಿದೆ ಎಂದು ಹೇಳಿದರು.

ಇದೇ ಮಾದರಿಯ ಪ್ರಯತ್ನ ಮಂಗಳೂರಿನಲ್ಲಿ ಕೂಡ ನಡೆದಿದೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಕುದ್ರೋಳಿ ದೇವಸ್ಥಾನದ ವಿಚಾರವನ್ನು ಬಳಸಿಕೊಂಡು ಆರ್‌‌ಎಸ್ಎಸ್ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹಾಗೂ ಹಿರಿಯ ಕಾಂಗ್ರೆಸ್‌‌ ಮುಖಂಡ ಜನಾರ್ದನ ಪೂಜಾರಿಯವರನ್ನು ನಿಂದಿಸಿ ಮಾತನಾಡಿದ್ದಾರೆ. ಹಾಗಾದರೆ ಕುದ್ರೋಳಿ ದೇವಸ್ಥಾನ ಮಟ್ಟು ಅವರದ್ದೇ ಎಂದು ಸುಲೋಚನಾ ಭಟ್ ಪ್ರಶ್ನಿಸಿದರು.

ಹೀಗೆ ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್‌ನವರು ರಾಜ್ಯದಲ್ಲಿ ಅರಾಜಕತೆಯ ಮೂಲಕ ಗೆಲ್ಲುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಜನತೆ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.