[1]ಮಂಗಳೂರು: ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ದುಷ್ಕರ್ಮಿಗಳ ದಾಳಿಗೆ ಮೃತಪಟ್ಟ ಅಬ್ದುಲ್ ಬಷೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮತ್ತೊರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಬಂಟ್ವಾಳದ ಕೇಪು ಗ್ರಾಮದ ಅಭಿಷೇಕ್ ಆರ್. ಎಸ್. ಎಂದು ಗುರುತಿಸಲಾಗಿದೆ. ಆರೋಪಿಯನ್ನು ಪುತ್ತೂರಿನ ಬನ್ನೂರು ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಆಕಾಶ ಭವನ ನಿವಾಸಿಯಾಗಿದ್ದ ಅಬ್ದುಲ್ ಬಷೀರ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪೊಲೀಸರು ಕಿಶನ್ ಪೂಜಾರಿ, ಶ್ರೀಜಿತ್, ಧನುಷ್ ಪೂಜಾರಿ, ಸಂದೆಶ್ ಕೋಟ್ಯಾನ್, ಪುಷ್ಪರಾಜ್ ಹಾಗೂ ಲತೇಲ್ ಎಂಬವರನ್ನು ಬಂಧಿಸಿದ್ದರು. ಈಗ ಇನ್ನೋರ್ವ ಆರೋಪಿ ಅಭಿಷೇಕ್ ನನ್ನು ಬಂಧಿಸಲಾಗಿದೆ.
ಜನವರಿ 3 ರಂದು ಮಂಗಳೂರು ಹೊರವಲಯದ ಕಾಟಿಪಳ್ಳ ದಲ್ಲಿ ದೀಪಕ್ ರಾವ್ ಅವರ ಹತ್ಯೆಯಾದ ಬಳಿಕ ಅದೇ ದಿನ ರಾತ್ರಿ ಕೊಟ್ಟಾರ ಚೌಕಿ ಬಳಿ ತನ್ನ ಫಾಸ್ಟ್ ಪುಡ್ ಅಂಗಡಿಯನ್ನು ಬಂದ್ ಮಾಡುತ್ತಿದ್ದ ಸಂದರ್ಭದಲ್ಲಿ ಅಬ್ದುಲ್ ಬಷೀರ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು.
ನಂತರ ಬಷೀರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಜನವರಿ 7ರಂದು ಮೃತಪಟ್ಟಿದ್ದರು.