[1]ಬೆಂಗಳೂರು: ಲೋಕಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದ ವೇಳೆ ಭಾಷಣ ಮಾಡುತ್ತಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರ ಹೆಸರು ಉಲ್ಲೇಖಿಸಿ ಮಾತನಾಡಿದ್ದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನೀವು ಸಂಸತ್ನಲ್ಲಿ ನನ್ನನ್ನು ಮತ್ತು ಬಸವಣ್ಣನವರನ್ನು ನೆನಪಿಸಿಕೊಂಡಿದ್ದರಿಂದ ಸಂತಸವಾಗಿದೆ. ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯಾ ಎಂದು ಬಸವಣ್ಣ ಹೇಳಿದ್ದರು. ಬಸವಣ್ಣನವರ ತತ್ವಗಳನ್ನು ನೀವು ಅನುಸರಿಸಿದರೆ ಕನ್ನಡಿಗರು ನಿಮಗೆ ಧನ್ಯವಾದ ಹೇಳುತ್ತಾರೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಬೀದರ್-ಕಲಬುರಗಿ ರೈಲ್ವೆ ಮಾರ್ಗ ಯೋಜನೆಗೆ ಅನುಮತಿ ನೀಡಲಾಗಿತ್ತು. 2004ರಿಂದ 2013ರ ವರೆಗೆ ಏನೂ ಕೆಲಸವಾಗಿಲ್ಲ ಎಂದು ಮೋದಿ ಆರೋಪಿಸಿದ್ದಕ್ಕೂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ರಾಜಕೀಯ ಉದ್ದೇಶಕ್ಕಾಗಿ ‘ಕೈ’ನಿಂದ ದೇಶ ವಿಭಜನೆ: ಸಂಸತ್ನಲ್ಲಿ ಮೋದಿ ವಾಗ್ದಾಳಿ
50:50 ಅನುದಾನ ಹಂಚಿಕೆಯಲ್ಲಿ ರೈಲ್ವೆ ಅಭಿವೃದ್ಧಿಗೆ ಮುಂದಾದ ಮೊದಲ ರಾಜ್ಯ ಕರ್ನಾಟಕ. 1,542 ಕೋಟಿ ವೆಚ್ಚದಲ್ಲಿ ಬೀದರ್ ಕಲಬುರಗಿ ರೈಲ್ವೆ ಮಾರ್ಗ ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ಕರ್ನಾಟಕ ಸರ್ಕಾರ 2007ರ ನಂತರ 691 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಪೈಕಿ ಶೇ. 70ರಷ್ಟು ಅನುದಾನ 2014ರ ನಂತರ ನಮ್ಮ ಸರ್ಕಾರ ಬಿಡುಗಡೆ ಮಾಡಿದೆ. ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ನಿನ್ನೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ್ದರು. ಬಶೀರ್ ಭದ್ರ ಶಾಯರಿಯಿಂದ ಭಾಷಣ ಆರಂಭಿಸಿದ್ದರು. ಈ ವೇಳೆ ಅವರು ಬಶೀರ್ ಶಾಯರಿ ಉಲ್ಲೇಖಿಸಿದ್ದರು. ಖರ್ಗೆಯವರ ಶಾಯರಿಯನ್ನು ಕರ್ನಾಟಕದ ಮುಖ್ಯಮಂತ್ರಿ ಕೇಳಿಸಿಕೊಂಡಿರಬಹುದು.
ಖರ್ಗೆಯವರು ಕರ್ನಾಟಕದ ಜನತೆಯನ್ನುದ್ದೇಶಿಸಿ ಮಾತನಾಡಿದ್ದರಾ ಅಥವಾ ತಮ್ಮದೇ ಸರ್ಕಾರದ ನೀತಿ- ನಿರ್ಧಾರಗಳ ಬಗ್ಗೆ ಭಾಷಣ ಮಾಡಿದ್ದರಾ? ನೀವು ದೇಶವನ್ನೇ ವಿಭಜಿಸಿದ್ದೀರಿ. ಭಾರತದ ವಿಭಜನೆ ಮಾಡಿರುವುದು ನಿಮ್ಮ ಚರಿತ್ರೆಯಲ್ಲಿದೆ. ಸ್ವಾತಂತ್ರ್ಯ ದೊರೆತು 70 ವರ್ಷಗಳಿಂದಲೂ ನಿಮ್ಮ ಪಾಪದ ಕೃತ್ಯ ನಡೆದಿದೆ. ನಿಮ್ಮ ಈ ಕಾರ್ಯಕ್ಕೆ 125 ಕೋಟಿ ಜನ ಪಾಠ ಕಲಿಸಿದ್ದಾರೆ ಎಂದು ಮೋದಿ ಚಾಟಿ ಬೀಸಿದ್ದರು.