[1]ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಪಕೋಡಾ ಹೇಳಿಕೆ ಭಾರಿ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಮೋದಿ ಅವರ ಪಕೋಡಾ ಹೇಳಿಕೆ ಬಗ್ಗೆ ಪರ ವಿರೋಧ ಚರ್ಚೆಗಳು ಕಾವು ಪಡೆದುಕೊಳ್ಳುತ್ತಿದೆ. ಇನ್ನೊಂದೆಡೆ ಮೋದಿ ಅವರ ಹೇಳಿಕೆ ವಿರೋಧಿಸಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಬೀದಿಗಿಳಿದು ಪಕೋಡಾ ಪ್ರತಿಭಟನೆ ನಡೆಸುತ್ತಿದ್ದಾರೆ.
ಚುನಾವಣೆಯ ಹೊಸ್ತಿಲಲ್ಲಿರುವ ಕರ್ನಾಟಕ ದಲ್ಲಿ ಮೋದಿ ಅವರ ಪಕೋಡಾ ಹೇಳಿಕೆ ರಾಜಕೀಯ ಮುಖಂಡರ ವಾಗ್ವಾದಕ್ಕೆ ವೇದಿಕೆ ಯಾಗುತ್ತಿದೆ. ರಾಜಕೀಯ ಪಕ್ಷಗಳ ಈ ಪಕೋಡಾ ಜಟಾಪಟಿ, ಪಕೋಡಾ ಮಾರಾಟಗಾರರನ್ನು ಕೆರಳಿಸಿದೆ.
ಪಕೋಡಾ ಮಾರಾಟ ಭಿಕ್ಷಾಟನೆಗೆ ಹೋಲಿಸಿರುವುದುರ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ನಿರುದ್ಯೋಗಿಯಾಗಿರುವುದಕ್ಕಿಂತ ಪಕೋಡಾ ಮಾರುವುದೇ ಲೇಸು ಎನ್ನುವುದು ಪಕೋಡಾ ಮಾರಾಟಗಾರರ ಅಭಿಮತ. ಪಕೋಡ ಮಾರಾಟ ಕೂಡ ಸ್ವಾಭಿಮಾನಿ ಬದುಕಿನ ಒಂದು ಮಾರ್ಗ! ಪಕೋಡಾ ಮಾರಾಟ ಮಾಡಿ ಜೀವನದ ಉತ್ತುಂಗಕ್ಕೆರಿದವರ ಹಲವಾರು ನಿದರ್ಶನಗಳು ನಮ್ಮ ಮುಂದಿದೆ. ಪಕೋಡಾ ಮಾರಾಟ ಮಾಡಿ ಸ್ವಾಭಿಮಾನಿ ಬದುಕು ನಡೆಸುತ್ತಿರುವ ಉದಾಹರಣೆ ಮಂಗಳೂರಿನಲ್ಲಿದೆ.
[2]ಮಂಗಳೂರಿನ ರಥ ಬೀದಿಯಲ್ಲಿರುವ ಬಳ್ಳಿ ಮಾಮ್ ಪಕೋಡಾ ಮಂಗಳೂರಿನಲ್ಲಿ ಭಾರಿ ಫೇಮಸ್. ಬಳ್ಳಿ ಮಾಮ್ ಅವರು ತಯಾರಿಸುವ ರುಚಿಕರ ಪಕೋಡಾ. ಅವರು ವ್ಯಾಪಾರ ಆರಂಭಿಸಿ, ನಂತರ ಅದನ್ನು ಉತ್ತುಂಗಕ್ಕೆರಿಸಿದ ಪರಿ ಆಷ್ಟೇ ‘ಕ್ರಿಸ್ಪಿ’ ವಿಚಾರ ಕೂಡ. ಪದವಿ ಶಿಕ್ಷಣಕ್ಕೆ ಗುಡ್ ಬೈ ಪದವಿ ಶಿಕ್ಷಣವನ್ನು ನಡುವಿನಲ್ಲೇ ನಿಲ್ಲಿಸಿ ಕುಟುಂಬ ನಿರ್ವಹಣೆಗೆ ಉದ್ಯೋಗ ಅರಸುವ ಅನಿವಾರ್ಯತೆ ರಾಜೇಶ್ ಬಾಳಿಗ ಅವರಿಗೆ ಎದುರಾಯಿತು. ಆದರೆ ಕೈಯಲ್ಲಿ ಬಿಡಿಗಾಸೂ ಇರಲಿಲ್ಲ.
ಹತಾಷರಾಗಿ ಕುಳಿತು ಕೊಳ್ಳದ ರಾಜೇಶ್ ಬಾಳಿಗ ಮಂಗಳೂರಿನ ಹೃದಯ ಭಾಗದ ರಥ ಬೀದಿ ಯಲ್ಲಿ 1993 ರಲ್ಲಿ ಪುಟ್ಟದೊಂದು ಅಂಗಡಿ ಮಾಡಿ ಪಕೋಡಾ ವ್ಯಾಪಾರ ಆರಂಭಿಸಿದರು. ವ್ಯಾಪಾರದಲ್ಲಿ ವೃದ್ಧಿ ಜೀವನ ನಿರ್ವಹಣೆಗಾಗುವಷ್ಟು ಗಳಿಕೆ ತರುತ್ತಿದ್ದ ಪಕೋಡಾ ವ್ಯಾಪಾರ ಮತ್ತಷ್ಟು ವೃದ್ದಿಸುವ ಪಣ ತೊಟ್ಟ ರಾಜೇಶ್ ಬಾಳಿಗಾ ಮತ್ತೆ ಹಿಂದಿರುಗಿ ನೋಡಲಿಲ್ಲ.
ಈ ಹಿಂದೆ ಎರಡು ರೀತಿಯ ಪಕೋಡಾ ಮಾರಾಟ ಮಾಡುತ್ತಿದ ಬಳ್ಳಿ ಮಾಮ್ ಈಗ ಹಲವಾರು ಬಗೆಯ ರುಚಿಕರ ಪಕೋಡಾ ಸೇರಿದಂತೆ ಇನ್ನಿತರ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಕಳೆದ 24 ವರ್ಷಗಳಿಂದ ರಾಜೇಶ್ ಮಾಮ್ ಪಕೋಡಾ ವ್ಯಾಪಾರ ನಡೆಸುತ್ತಿದ್ದಾರೆ.