[1]ಬೆಂಗಳೂರು: ಶತಾಯಗತಾಯ ರಾಜ್ಯ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಹಾಗೂ ಬಿಜೆಪಿಯ ರಾಷ್ಟ್ರೀಯ ಮುಖಂಡರು ಒಬ್ಬರಾದ ನಂತರ ಒಬ್ಬರು ರಾಜ್ಯದಲ್ಲಿ ರ್ಯಾಲಿಗಳನ್ನು ನಡೆಸಲು ನಿರ್ಧರಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಫೆ. ನಾಳೆ (10) ಯಿಂದ ಮೂರು ದಿನ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಫೆ.18 ರಿಂದ ಮೂರು ದಿನಗಳ ಕಾಲ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಚುನಾವಣಾ ವೇಳಾಪಟ್ಟಿ ಪ್ರಕಟಣೆಗೂ ಮುನ್ನ ನಾಲ್ಕು ರ್ಯಾಲಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ರಾಹುಲ್ ಫೆ.10ರಂದು ಹೊಸಪೇಟೆಯಿಂದ ಆರಂಭವಾಗುವ ರಾಹಲ್ ಯಾತ್ರೆ ಬೀದರ್ವರೆಗೆ ಸಾಗಲಿದೆ. ಈ ಸಂದರ್ಭದಲ್ಲಿ ಅಲ್ಲಲ್ಲಿ ಸಂವಾದ ಸಣ್ಣ ಸಣ್ಣ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ದೇವಾಲಯ, ಮಸೀದಿಗಳಿಗೂ ಭೇಟಿ ನೀಡಲಿದ್ದಾರೆ.
ಫೆ.27ರಂದು ದಾವಣಗೆರೆಯಲ್ಲಿ ಯಡಿಯೂರಪ್ಪರ ಹುಟ್ಟುಹಬ್ಬದ ಅಂಗವಾಗಿ ನಡೆಯುವ ರೈತ ಸಮಾವೇಶದಲ್ಲಿ ಭಾಗವಹಿಸಲಿರುವ ಮೋದಿ ನಂತರ ಬೆಳಗಾವಿ, ಬೀದರ್, ಮೈಸೂರುಗಳಲ್ಲಿಯೂ ರ್ಯಾಲಿ ನಡೆಸಲಿದ್ದು, ಇನ್ನೂ ದಿನಾಂಕ ನಿಗದಿಯಾಗಿಲ್ಲ.
ಮಲ್ಪೆ ಕಡಲ ತೀರದಲ್ಲಿ ಫೆ.19 ರಂದು ಉಡುಪಿ, ದ.ಕ, ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರರ ಸಮಾವೇಶ ನಡೆಯಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉದ್ಘಾಟಿಸಲಿದ್ದಾರೆ. ಬಳಿಕ ಶ್ರೀಕೃಷ್ಣ ಮಠ ಹಾಗೂ ಪೇಜಾವರ ಶ್ರೀಗಳನ್ನು ಭೇಟಿಯಾಗಲಿದ್ದಾರೆ.
ಫೆ. 20ರ ಬೆಳಗ್ಗೆ 10 ಗಂಟೆಗೆ ಸಾಮಾಜಿಕ ಜಾಲತಾಣಗಳ ಪ್ರಮುಖರ ಸಮಾವೇಶ, 11 ಗಂಟೆಯಿಂದ ಆರು ಜಿಲ್ಲೆಗಳ ಶಕ್ತಿಕೇಂದ್ರ ಪ್ರಮುಖರ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನದ ನಂತರ ಹೊನ್ನಾವರಕ್ಕೆ ಆಗಮಿಸಿ ಪರೇಶ್ ಮೇಸ್ತಾ ಕುಟುಂಬದವರನ್ನು ಭೇಟಿ ಮಾಡಲಿದ್ದಾರೆ. ವಾಪಸ್ ಕುಮಟಾಕ್ಕೆ ಆಗಮಿಸಿ ಮಣಕಿ ಮೈದಾನದಲ್ಲಿ 4 ಗಂಟೆಗೆ ಕರಾವಳಿಯ ಮೂರು ಕ್ಷೇತ್ರಗಳ ಬೂತ್ ಪ್ರಮುಖರ ಸಭೆ ನಡೆಸಲಿದ್ದಾರೆ. ನಂತರ ಶಿರಸಿಗೆ ತೆರಳಿ ಮಾರಿಕಾಂಬೆಯ ದರ್ಶನ ಪಡೆದು ಅಲ್ಲಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.