[1]ವಿಟ್ಲ: ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಫೆ.25ರ ವರೆಗೆ ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವ, ಶ್ರೀನಿವಾಸ ಕಲ್ಯಾಣೋತ್ಸವ, ಪ್ರತಿಷ್ಠಾ ವರ್ಧಂತ್ಯುತ್ಸವ, ಶ್ರೀ ದೈವಗಳ ನೇಮೋತ್ಸವದ ಉದ್ಘಾಟನೆಯನ್ನು ಪ್ರಥಮ ದಿನವಾದ ಫೆ.18ರಂದು ಶ್ರೀಧಾಮದ ಶ್ರೀ ನಿತ್ಯಾನಂದ ವೇದಿಕೆಯಲ್ಲಿ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಮ್ನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಎಲ್ಲಿ ತನ್ಮಯತೆ ಇದೆಯೋ ಅಲ್ಲಿ ಉನ್ನತಿ ಇದೆ. ತ್ಯಾಗ ತುಂಬಿದ ಸೇವೆ ಭಗವಂತನಿಗೆ ಪ್ರಿಯವಾದುದು. ಧರ್ಮದಲ್ಲಿ ರಾಜಕೀಯ ಬೇಡ, ರಾಜಕೀಯದಲ್ಲಿ ಧರ್ಮಬೇಕು. ಸಾಮರ್ಥ್ಯ ಸಹಕಾರವಾಗುವುದು ಅವಕಾಶ ಬಂದಾಗ. ಸಾಮರ್ಥ್ಯ ಸಾಕಾರಗೊಳ್ಳುವುದು ಅವಕಾಶ ಬಂದಾಗ. ಮನುಷ್ಯ ಸಂಕಲ್ಪ ಶ್ರೇಷ್ಟವಾದುದು. ಶ್ರೀ ಧಾಮದಲ್ಲಿ ಅದು ಸಕಾರವಾಗಿದೆ ಎಂದು ಒಡಿಯೂರು ಶ್ರೀ ಹೇಳಿದರು.
ಈ ಸಂದರ್ಭ ಆಶೀರ್ವಚನ ನೀಡಿದ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಗೆಲುವನ್ನು ಸಾಧಿಸುವುದೇ ನಿಜವಾದ ಯಶಸ್ಸು, ಕೆಡುಕಿನಲ್ಲಿಯೂ ಒಳ್ಳೆಯದನ್ನು ಕಂಡಾಗ ನಿಜವಾದ ಯಶಸ್ಸು ಸಿಗುತ್ತದೆ ಎಂದು ಹೇಳಿದರು.
[2]ಶಾಸಕಿ ಶಕುಂತಳಾ ಟಿ ಶೆಟ್ಟಿಯವರು ಮಾತನಾಡಿ ಮಾಣಿಲ ಸ್ವಾಮಿಗಳ ಪರಿಶ್ರಮದಿಂದ ಮಾಣಿಲ ಕ್ಷೇತ್ರವು ದಿನದಿಂದ ದಿನಕ್ಕೆ ಪ್ರಸಿದ್ದಿ ಪಡೆಯುತ್ತಿದೆ. ರಾಜ್ಯ ಸರಕಾರದ ವತಿಯಿಂದ ಕ್ಷೇತ್ರಕ್ಕೆ ಬರುವಂತಹ ರಸ್ತೆಗೆ ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಮಾರ್ಚ್ ಅಂತ್ಯದೊಳಗೆ ಈ ರಸ್ತೆಯ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಉಪಸ್ಥಿತರಿದ್ದರು. ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ವಿಟ್ಲ ಅರಮನೆ ಜನಾರ್ದನ ವರ್ಮ ಅರಸರು, ಕುಕ್ಕಾಜೆ ಶ್ರೀ ಕಾಳಿಕಾಂಬಾ ವೀರಾಂಜನೇಯ ಕ್ಷೇತ್ರದ ಧರ್ಮದರ್ಶಿಗಳಾಗಿರುವ ಶ್ರೀಕೃಷ್ಣ, ಉದ್ಯಮಿಗಳಾದ ಬಾಸ್ಕರ ಶೆಟ್ಟಿ ಪುಣೆ ಮಾತನಾಡಿದರು.
ಮದರ್ ಫೌಂಡೇಶನ್ ಬೆಂಗಳೂರು ಮತ್ತು ಕುತ್ಯಾರು ಇದರ ಸಂಸ್ಥಾಪಕರಾದ ರಾಜೇಶ್ ಶೆಟ್ಟಿ ಕುತ್ಯಾರು, ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಮಹಾಬಲೇಶ್ವರ ಎಂ. ಎಸ್, ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಹರೀಶ್ ಶೆಟ್ಟಿ ಐಕಳ, ನವದೆಹಲಿ ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಯೋಜನಾ ಆಯೋಗದ ಸ್ಥಾಯಿ ಸಮಿತಿ ಸದಸ್ಯ ಡಾ| ಎಂ. ಅಣ್ಣಯ್ಯ ಕುಲಾಲ್ ಉಳ್ತೂರು, ಶ್ರೀ ಮಂಗಳಾದೇವಿ ದೇವಸ್ಥಾನ ಆಡಳಿತ ಮೊಕ್ತೇಸರರಾದ ಪಿ. ರಮಾನಾಥ ಹೆಗ್ಡೆ, ಕೊಡಗು ಜಿಲ್ಲೆ ಬಿ.ಜೆ.ಪಿ. ವಕ್ತಾರರು, ನೋಟರಿ ವಕೀಲರಾಗಿರುವ ಬಿ. ರತ್ನಾಕರ್ ಶೆಟ್ಟಿ, ಮಾಣಿಲ ಗ್ರಾ.ಪಂ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಯು.ಎ.ಇ. ಎಕ್ಸ್ಚೇಂಜ್ ಆಡಳಿತ ನಿರ್ದೇಶಕರಾದ ಸುಧೀರ್ ಕುಮಾರ್ ಶೆಟ್ಟಿ,ಉದ್ಯಮಿ ದಯಾನಂದ ಬಂಗೇರ ಮುಂಬಯಿ, ಸಿಎಂಎ ಸಿಜಿಎಂ ಶೇರ್ಡ್ ಸರ್ವಿಸ್ ಸೆಂಟರ್ಸ್ ಇಂಡಿಯಾ ಪ್ರೈ. ಲಿ. ರೀಜನಲ್ ಮೆನೇಜಿಂಗ್ ಡೈರೆಕ್ಟರ್ ಸಿ. ಎಸ್. ಆನಂದ್, ರಾಜೇಶ್ ಪಾಟೀಲ್ ಮೊದಲಾವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
[3]ಈ ಸಂದರ್ಭದಲ್ಲಿ ಉದ್ಯಮಿಗಳಾದ ದಯಾನಂದ ಬಂಗೇರ ಮುಂಬಾಯಿ ಹಾಗೂ ಭಾಸ್ಕರ ಶೆಟ್ಟಿ ಪುಣೆಯವರು ಶ್ರೀ ಧಾಮಕ್ಕೆ ನೀಡಿದ ಹೊಸ ಕಾರಿನ ಕೀಯನ್ನು ಸ್ವಾಮೀಜಿಗೆ ಹಸ್ತಾಂತರಿಸಿದರು.
ಶಾಸಕಿ ಶಕುಂತಳಾ ಟಿ ಶೆಟ್ಟಿಯವರನ್ನು ಗೌರವಿಸಲಾಯಿತು.
ಗೀತಾಪುರುಷೋತ್ತಮ ಹಾಗೂ ಮೀನಾಕ್ಷಿ ಪ್ರಾರ್ಥಿಸಿದರು. ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಚೆಲ್ಲಡ್ಕ ಸ್ವಾಗತಿಸಿ ಗೌರವ ಸಲಹೆಗಾರ ತಾರನಾಥ ಕೊಟ್ಟಾರಿ ಫರೆಂಗಿಪೇಟೆ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಮಂಜು ವಿಟ್ಲ ಸಹಕರಿಸಿದರು.ಹೊರೆಕಾಣಿಕೆ ಸಮಿತಿ ಸಂಚಾಲಕ ಮಚ್ಚೇಂದ್ರ ಸಾಲಿಯಾನ್ ವಂದಿಸಿದರು.
ಸಂತೋಷ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.