ಮಂಗಳೂರು: ಬಿಜೆಪಿ ಕರ್ನಾಟಕದಿಂದ ಮಾರ್ಚ್ 3ರಿಂದ 6ರವರೆಗೆ ಏಕಕಾಲದಲ್ಲಿ ಅಂಕೋಲ ಮತ್ತು ಕುಶಾಲನಗರದಿಂದ ಜನ ಸುರಕ್ಷಾ ‘ ಮಂಗಳೂರು ಚಲೋ ’ ಹೆಸರಿನ ಪಾದಯಾತ್ರೆ ಆರಂಭಗೊಳ್ಳಲಿದೆ.
ಮಾರ್ಚ್ 6ರಂದು ನಗರದ ನೆಹರು ಮೈದಾನದಲ್ಲಿ ಸಮಾವೇಶ ನಡೆಯಲಿದೆ ಸಮಾವೇಶದಲ್ಲಿ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ , ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ರಾಜ್ಯ ಸರಕಾರದ ತುಷ್ಟೀಕರಣ ನೀತಿಯನ್ನು ವಿರೋಧಿಸಿ, ಹಿಂದೂ ಕಾರ್ಯಕರ್ತರ ಕೊಲೆಗಳನ್ನು ಸಿಬಿಐ ತನಿಖೆಗೆ ಒಳಪಡಿಸಲು ಆಗ್ರಹಿಸಿ, ಹಿಂದುತ್ವದ ಹೆಸರಿನಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸ್ಥಾಪಿಸಲು ಮತ್ತು ಸಿದ್ದರಾಮಯ್ಯ ಸರಕಾರವನ್ನು ಕಿತ್ತೊಗೆಯಲು ಸಂಕಲ್ಪ ತೊಟ್ಟು, ಪಿಎಫ್ಐ ಹಾಗೂ ಎಸ್ಡಿಪಿಐ ಯನ್ನು ನಿಷೆಧಿಸಲು ಆಗ್ರಹಿಸಿ ಈ ಜನಸುರಕ್ಷಾ ಯಾತ್ರೆ ನಡೆಯಲಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಮಾರ್ಚ್ 3ರಂದು ಕುಶಾಲ ನಗರದಿಂದ ಆರಂಭವಾಗುವ ಒಂದು ಪಾದಯಾತ್ರೆಯನ್ನು ಸಚಿವ ಡಿ.ವಿ.ಸದಾನಂದ ಗೌಡ ಸ್ಥಳೀಯ ಇಬ್ಬರು ಸಂಸದ ನೇತೃತ್ವದಲ್ಲಿ ಉದ್ಘಾಟಿಸಲಿದ್ದಾರೆ. ಅದೇ ದಿನ ಅಂಕೋಲದಿಂದ ಆರಂಭವಾಗುವ ಪಾದಯಾತ್ರೆಯನ್ನು ಸಚಿವ ಪ್ರಕಾಶ್ ಜಾವ್ಡೇಕರ್ ಉದ್ಘಾಟಿಸಲಿದ್ದಾರೆ. ಒಟ್ಟು 337 ಕಿ ಮೀ ನಡೆಯುವ ಈ ಯಾತ್ರೆಯಲ್ಲಿ 97 ಕಿ.ಮೀ ಪಾದಯಾತ್ರೆ ನಡೆಯಲಿದೆ.
ಎರಡು ಯಾತ್ರೆಗಳು ಮಾರ್ಚ್ 6ರಂದು ಮಂಗಳೂರು ತಲುಪಲಿದೆ ಬಳಿಕ ಮಂಗಳೂರಿನಲ್ಲಿ ಪಾದಯಾತ್ರೆ ಮತ್ತು ಸಮಾವೇಶ ನಡೆಯಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಅಂಕೋಲ, ಕುಮಟಾ, ಹೊನ್ನಾವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ,ಕಾಪು ,ಬೈಕಂಪಾಡಿ ಮೂಡಬಿದ್ರೆ ಮಾರ್ಗವಾಗಿ ಮಂಗಳೂರು ತಲುಪಲಿದೆ.ಕುಶಾಲನಗರದಿಂದ ಆಗಮಿಸುವ ಈ ಯಾತ್ರೆ ಮಡಿಕೇರಿ, ಸುಳ್ಯ, ಪುತ್ತೂರು, ಮಾಣಿ, ಬಿ.ಸಿ ರೋಡ್ ಮಾರ್ಗವಾಗಿ ಮಾರ್ಚ್ 6ರಂದು ಮಂಗಳೂರು ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ತಲುಪಲಿದೆ. ಬಳಿಕ ನೆಹರು ಮೈದಾನದ ವರೆಗೆ ಪಾದಯಾತ್ರೆ ನಡೆದು ಸಮಾವೇಶ ನಡೆಯಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಟಂದೂರು, ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಕ್ಯಾ.ಬ್ರಿಜೇಶ್ ಚೌಟ, ಜಿತೇಂದ್ರ ಕೊಟ್ಟಾರಿ, ರಾಜೇಶ್, ರವಿಚಂದ್ರ, ವೇದವ್ಯಾಸ ಕಾಮತ್, ಸುಧೀರ್ ಶೆಟ್ಟಿ ಕಣ್ಣೂರು ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English