[1]ಮಂಗಳೂರು: ಗಾಂಜಾ ಮಾರಾಟದ ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ಮಾಡಿದ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
ಕೊಣಾಜೆ ಪೊಲೀಸ್ ಠಾಣಾ ಸರಹದ್ದಿನ ತೌಡುಗೋಳಿ ಕ್ರಾಸ್ ಬಳಿ ಯುವಕನೋರ್ವ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸಿಪಿ ರಾಮರಾವ್ ನೇತೃತ್ವದ ರೌಡಿ ನಿಗ್ರಹ ದಳ ಸಿಬ್ಬಂದಿ ಮತ್ತು ಕೊಣಾಜೆ ಪೊಲೀಸರು ಓರ್ವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಟ್ವಾಳ ತೌಡುಗೋಳಿಯ ಹಫೀಜ್ ಯಾನೆ ಅಭಿ ಯಾನೆ ಮೊಯ್ದಿನಬ್ಬ (32) ವಶಕ್ಕೆ ಪಡೆದುಕೊಂಡ ಆರೋಪಿ. ಆತನಿಂದ ಸುಮಾರು 1.350 ಕೆಜಿ ಗಾಂಜಾ ಮತ್ತು ನಗದು 2500 ರೂ. ಸ್ವಾಧೀನಪಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈತನ ಮೇಲೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ, ಕರಾವಳಿ ಕಾವಲು ಪಡೆ ಠಾಣೆ, ಕೊಣಾಜೆ ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಗಾಂಜಾ ಮಾರಾಟದ ಬಗ್ಗೆ ಪ್ರಕರಣ ದಾಖಲಾಗಿತ್ತು. ಸುಮಾರು ಒಂದೂವರೆ ತಿಂಗಳ ಜಾಮೀನಿನ ಮೇಲೆ ಹೊರಬಂದಿದ್ದ. ಈಗಾಗಲೆ ಈತನ ಮೇಲೆ ಉಳ್ಳಾಲ ಪೊಲೀಸ್ ಠಾಣೆಯ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಮಾನ್ಯ ನ್ಯಾಯಾಲಯ ವಾರಂಟ್ ಕೂಡ ಹೊರಡಿಸಿತ್ತು.