ಬೆಂಗಳೂರು : ಮಲ್ಲೇಶ್ವರಂನಲ್ಲಿ ಯುವತಿಯೊಬ್ಬಳ ಸರ ದೋಚಿ ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರು ಸರಗಳ್ಳರನ್ನು ನವರಸನಾಯಕ ನಟ ಜಗ್ಗೇಶ್ ಮತ್ತು ಅವರ ಕಾರಿನ ಚಾಲಕ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ಸಂಜೆ ನಡೆದಿದೆ. ಬಂಧಿತರು ಶೇಷಾದ್ರಿಪುರಂ ಹಾಗೂ ಆಸ್ಟಿನ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು.
ಮಲ್ಲೇಶ್ವರಂ ಹನ್ನೊಂದನೆ ಅಡ್ದರಸ್ತೆಯಲ್ಲಿ ಎಂಇಎಸ್ ಕಾಲೇಜಿನ ವಿದ್ಯಾರ್ಥಿನಿ ಶ್ರುತಿ ಸಂಜೆ 6 ರ್ ಹೊತ್ತಿಗೆ ಕಾಲೇಜು ಮುಗಿಸುಕೊಂಡು ನಡೆದುಕೊಂಡು ಹೋಗುತ್ತಿದ್ದರು. ಅದೇ ಹೊತ್ತಿಗೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಆಕೆಯ ಕತ್ತಿನಲ್ಲಿದ್ದ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದರು. ಶ್ರುತಿ ಸರವನ್ನು ಕೈಯಲ್ಲಿ ಗಟ್ಟಿ ಹಿಡಿದು ಕೆಳಗೆ ಕುಳಿತುಕೊಂಡಿದ್ದಾಳೆ ಅಷ್ಟಕ್ಕೆ ಸುಮ್ಮನಾಗದ ಕಿಡಿಗೇಡಿಗಳು ಶ್ರುತಿಯ ಜಡೆ ಇಳಿದುಕೊಂಡು ಧರಧರನೆ ಸ್ವಲ್ಪ ದೂರ ಎಳೆದುಕೊಂಡು ಹೋಗಿದ್ದಾರೆ. ಆದರೂ ಶ್ರುತಿ ಸರವನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಸರ ಕಿತ್ತುಕೊಳ್ಳಲು ವಿಫಲರಾದ ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ನಟ ಜಗ್ಗೇಶ್ ಹಾಗೂ ಅವರ ಕಾರು ಚಾಲಕ ಪದ್ಮನಾಭ ರಸ್ತೆಯಲ್ಲಿ ಹೋಗುತ್ತಿದ್ದವರೊಬ್ಬರ ಬೈಕನ್ನು ಪಡೆದು ಸರಗಳ್ಳರನ್ನು ಬೆನ್ನತ್ತಿದ್ದಾರೆ.
ಸರಗಳ್ಳರು ಸಣ್ಣ ಪುಟ್ಟ ರಸ್ತೆಗಳೆಲ್ಲೆಲ್ಲಾ ನುಗ್ಗುತ್ತಾ ಎಕ್ಸೇಫ್ ಆಗಲು ಪ್ರಯತ್ನಿಸುತ್ತಿದ್ದರು. ಆದರೂ ನಾವು ಅವರನ್ನು ಹಿಂಬಾಲಿಸುತ್ತಲೇ ಹೋದೆವು. ಕ್ಯೂನಿ ಕಾನ್ವಂಟ್ ಬಳಿ ಕಾರೊಂದು ಅಡ್ಡಬಂದ ಕಾರಣ ಕಿಡಿಗೇಡಿಗಳು ತಮ್ಮ ಬೈಕನ್ನು ನಿಲ್ಲಿಸಿದರು. ನಾವು ಹಿಂದಿನಿಂದ ಅವರ ಬೈಕಿಗೆ ಡಿಕ್ಕಿ ಹೊಡೆದು ಕೆಳಗುರುಳಿಸಿದೆವು. ಬಳಿಕ ಇಬ್ಬರನ್ನು ಹಿಡಿದುಕೊಂಡೆವು ಎಂದು ಜಗ್ಗೇಶ್ ಹೇಳಿದ್ದಾರೆ.
ಸ್ನೇಹಿತರಿಗೆ ಪಾರ್ಟಿ ಕೊಡಿಸಲು ಈ ಕೆಲಸ ಮಾಡಿದ್ದಾಗಿ ಸರಗಳ್ಳಲು ತಿಳಿಸಿದ್ದು, ತಮ್ಮನ್ನು ಪೊಲೀಸರಿಗೆ ಒಪ್ಪಿಸದೆ ಬಿಟ್ಟುಬಿಡುವಂತೆ ಅಂಗಲಾಚಿ ಬೇಡಿಕೊಂಡರು. ಯುವಕರು ಹಣಕ್ಕಾಗಿ ಈ ರೀತಿಯ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗುತ್ತಿರುವುದು ವಿಷಾದನೀಯ. ತಂದೆತಾಯಿ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದಿದ್ದಾರೆ ಜಗ್ಗೇಶ್. ಸಿನಿಮಾದಲ್ಲಿ ಮಾಡುತಿದ್ದ ರೋಲನ್ನು ನಿಜಜೀವನದಲ್ಲೂ ಜಗ್ಗೇಶ್ ಮಾಡಿತೋರಿಸಿದ್ದಾರೆ.