[1]ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿಯೋಜನೆ, ಶಾರದಾಂಭ ಭಜನಾ ಮಂಡಳಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ `ಸೌಖ್ಯ.. ಸ್ವಾಸ್ಥ್ಯದೆಡೆಗೆ ನಮ್ಮ ನಡಿಗೆ’- ಆಳ್ವಾಸ್ ಆರೋಗ್ಯಕೇಂದ್ರ ಹಾಗು ಆಪ್ತ ಸಮಾಲೋಚನಾ ಕೇಂದ್ರದ ಉಧ್ಘಾಟನಾ ಸಮಾರಂಭವನ್ನು, ಪೆರಾಡಿಯ ಶಾರದಾಂಭ ಭಜನಾ ಮಂದಿರದಲ್ಲಿ ಭಾನುವಾರ ಆಯೋಜಿಸಲಾಯಿತು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಇಂತಹಾ ಆಪ್ತ ಸಮಾಲೋಚನಾ ಕೇಂದ್ರ ಕಾರ್ಯಗತಗೊಳಿಸುತ್ತಿರುವುದು ಉತ್ತಮ ನಡೆ. ಗ್ರಾಮೀಣ ಪ್ರದೇಶದ ಜನರಿಗೆ ಇದು ಇದು ಪ್ರಯೋಜನಕಾರಿಯಾಗುತ್ತದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಜನರೊಂದಿಗೆ ಬೆರೆಯಲು ಕೂಡ ಇದು ಉತ್ತಮ ವೇದಿಕೆಯಾಗುತ್ತದೆ. ಗ್ರಾಮೀಣ ಪ್ರದೇಶದ ಜನರಲ್ಲಿ ಮಾನಸಿಕ ಆರೋಗ್ಯ ವೃದ್ಧಿಸುವ ಕೆಲಸ ಈ ಕೇಂದ್ರದಿಂದ ಆಗಲಿ ಎಂದು ಶುಭ ಹಾರೈಸಿದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಯಾವುದೇ ಊರಿನಲ್ಲಿ ಮಹಿಳೆಯ ಸ್ವಾಸ್ಥ್ಯದ ಬಗ್ಗೆ ಹೆಚ್ಚು ನಿಗಾವಹಿಸಬೇಕು ದೇಶದ ಆರೋಗ್ಯಮಟ್ಟವನ್ನು ಅಲ್ಲಿನ ಮಹಿಳೆಯರ, ಮಕ್ಕಳ ಆರೋಗ್ಯಪ್ರಮಾಣದ ಮೇಲೆ ಸೂಚಿಸಲಾಗುತ್ತದೆ. ಇಡೀ ಗ್ರಾಮದ ಮನಸ್ಥಿತಿ ಜನರ ಆರೋಗ್ಯ ಹಾಗು ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ. ಎಲ್ಲಿ ಒಳ್ಳೆಯ ಮನಸ್ಥಿತಿ ಇರುತ್ತದೆಯೋ ಅಲ್ಲಿಉತ್ತಮ ಆರೋಗ್ಯಸ್ಥಿತಿ ಇರುತ್ತದೆ ಎಂದರು.
ಗ್ರಾಮಸ್ಥರಿಗಾಗಿ ಆಯೋಜಿಸಿದ್ದ ವಿವಿಧ ಆಟೋಟ ಸ್ಪರ್ಧೆಗಳ ಬಹುಮಾನ ವಿತರಣೆ ಮಾಡಲಾಯಿತು.
ಶಾಸಕ ವಸಂತ ಬಂಗೇರ, ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀನಿವಾಸ್ ಭಟ್, ಜಿಲ್ಲಾ ಪಂಚಾಯಿತಿ ಸದಸ್ಯ ಧರಣೇಂದ್ರಕುಮಾರ್, ಬೆಳ್ತಂಗಡಿ ಎ.ಪಿ.ಎಂ.ಸಿ ಅಧ್ಯಕ್ಷ ಸತೀಶ್ ಕೆ ಕಾಶಿಪಟ್ಣ, ಶ್ರೀ.ಕ್ಷೇ.ಧ.ಗ್ರಾ. ಯೋಜನೆಯ ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯೆ ರೂಪಲತಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾನಂದ ಶೆಟ್ಟಿ, ಜನಜಾಗೃತಿ ವೇದಿಕೆಯ ಮಾಜಿಅಧ್ಯಕ್ಷ ಪಿ ಕೆ ರಾಜು ಪೂಜಾರಿ, ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ನಾರಾವಿ ವಲಯ ಮೇಲ್ವಿಚಾರ ಗಿರೀಶ್ಕುಮಾರ್ ಎಂ, ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ಶಾಸ್ತ್ರ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.