[1]ಮಂಗಳೂರು: ದಲಿತ ಸಮುದಾಯಕ್ಕೆ ಸೇರಿದ 11 ಮಂದಿ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ದಲಿತ ಸಂಘರ್ಷ ಸಮಿತಿಯ ಪುತ್ತೂರು ತಾಲೂಕು ಸಂಘಟನಾ ಸಂಚಾಲಕ ಆನಂದ ಮಿತ್ತಬೈಲ್ ನೇತೃತ್ವದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಕಡಬ ತಾಲೂಕಿನ ಆಲಂಕಾರು ತೋಟಂತಿಲ ಎಂಬಲ್ಲಿ ಪುಟ್ಟಣ್ಣ ಎಂಬವರು ನೂತನವಾಗಿ ನಿರ್ಮಿಸಿದ ‘ಮೈತ್ರಿ ವಿಹಾರ’ ಗೃಹ ಪ್ರವೇಶವನ್ನು ದಕ್ಷಿಣ ಕನ್ನಡ ಜಿಲ್ಲಾ ಬೌದ್ಧ ಮಹಾಸಭಾ(ರಿ.)ದ ಭಂತೇಜಿ ಮೈಸೂರು ಕೊಳ್ಳೇಗಾಲದ ಜೇತವನ ಬುದ್ಧ ವಿಹಾರದ ಪೂಜ್ಯ ಸುಗತಪಾಲ ಭಂತೇಜಿ ನೆರವೇರಿಸಿದರು.
ಇದೇ ಸಂದರ್ಭ ಸುಗತಪಾಲ ಭಂತೇಜಿ ಅವರು ಬುದ್ಧ ಶಾಸನದ ಪ್ರಕಾರ ಬುದ್ಧ ಪೂಜೆ ನೆರವೇರಿಸಿ ಧರ್ಮೋಪದೇಶ ನೀಡಿದರು.
ಈ ಸಂದರ್ಭ ಮಾತನಾಡಿದ ದಲಿತ ಮುಖಂಡ ಆನಂದ ಮಿತ್ತಬೈಲ್, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಯಂತೆ ನೈಜ ಧಾರ್ಮಿಕ ವಿಧಿ ವಿಧಾನಗಳನ್ನು ಹಾಗೂ ಆಶಯಗಳನ್ನು ಜೀವನದಲ್ಲಿ ಅಳವಡಿಕೊಳ್ಳುವುದರ ಮೂಲಕ ಪ್ರೊ. ಬಿ.ಕೃಷ್ಣಪ್ಪರ ಕನಸನ್ನು ಈಡೇರಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಸಮುದಾಯದ ಪುಟ್ಟಣ್ಣ, ಸುಶೀಲಾ, ನಯನ್ ಕುಮಾರ್, ನಮಿತಾ, ಸತೀಶ್ ಕುಮಾರ್, ಪ್ರೇಮಾ, ಹರ್ಷ, ಸುಶೀಲಾ, ಮನೋಜ್ ಕುಮಾರ್, ವಿಶ್ವನಾಥ್ ಹಾಗೂ ಗಣೇಶ್ ಎಂಬವರು ಆನಂದ ಮಿತ್ತಬೈಲ್ ನೇತೃತ್ವದಲ್ಲಿ ಬೌದ್ಧ ಧರ್ಮದ ದೀಕ್ಷೆ ಪಡೆದು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.