ಮಂಗಳೂರು: ಗೋವಾ ರಾಜ್ಯಗಳಿಗೆ ಸಂಬಂಧಿಸಿದಂತೆ 2016ರಿಂದ ಆದಾಯ ತೆರಿಗೆ ಇಲಾಖೆಯ ಮೂಲಕ ನಡೆದ ಕಾರ್ಯಾಚರಣೆಯಲ್ಲಿ 500 ಕೋಟಿ ಬೇನಾಮಿ ಆಸ್ತಿ ಪತ್ತೆಯಾಗಿದೆ ಎಂದು ಕರ್ನಾಟಕ, ಗೋವಾ ರಾಜ್ಯದ ಆದಾಯ ತೆರಿಗೆ ಇಲಾಖೆಯ ಮಹಾ ನಿರ್ದೇಶಕ ಬಿ.ಆರ್. ಬಾಲಕೃಷ್ಣನ್ ತಿಳಿಸಿದ್ದಾರೆ.
ಆದಾಯ ತೆರಿಗೆ ಹೆಚ್ಚುವರಿ ಆಯುಕ್ತರ ಕೇಂದ್ರೀಯ ವಿಭಾಗದ ನೂತನ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಣ ಅಪ ನಗದೀಕರಣದ ಸಂದರ್ಭದಲ್ಲಿ ಹಲವರಿಗೆ ತೊಂದರೆಗಳಾಗಿವೆ. ಕೆಲವು ಸಹಕಾರಿ ಬ್ಯಾಂಕ್ಗಳಿಗೆ ಸಮಸ್ಯೆಯಾಗಿರಬಹುದು. ಹಲವು ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಸೂಕ್ತ ದಾಖಲೆಗಳನ್ನು ಹಾಜರುಪಡಿಸಿದ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಬಾಲಕೃಷ್ಣನ್ ಹೇಳಿದರು.
ಚುನಾವಣೆಯಲ್ಲಿ ಅಕ್ರಮವಾಗಿ ಹಣ ಹಂಚುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಲು ತೆರಿಗೆ ಆಯುಕ್ತಾಲಯದ ಸುಸಜ್ಜಿತ ತಂಡ ಕಾರ್ಯನಿರ್ವಹಿಸಲಿದೆ. ಚುನಾವಣಾ ಆಯೋಗ ಈ ಬಗ್ಗೆ ಸಭೆ ನಡೆಸಲಿದೆ. ಆಯೋಗದ ನಿರ್ದೇಶನದ ಪ್ರಕಾರ ಕರ್ನಾಟಕದ ಚುನಾವಣೆಯಲ್ಲೂ ತಮಿಳುನಾಡಿನ ಚುನಾವಣಾ ಸಂದರ್ಭದಲ್ಲಿ ನಡೆದಂತೆ ಕಾರ್ಯಾಚರಣೆ ನಡೆಯಲಿದೆ ಎಂದರು.
ತಮಿಳುನಾಡಿನ ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಕಾರ್ಯಾಚರಣೆಯ ಮೂಲಕ 40 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಕರ್ನಾಟಕದಲ್ಲೂ ಚುನಾವಣೆಯ ಸಂದರ್ಭದಲ್ಲಿ ಅಕ್ರಮವಾಗಿ ಹಣದ ಬಳಸುತ್ತಿರುವ ಬಗ್ಗೆ ಆರೋಪಗಳಿವೆ. ಈ ಅಕ್ರಮ ಹಣದ ಆಮಿಷಕ್ಕೆ ಜನರು ಬಲಿಯಾಗದೆ ಮತದಾನದಲ್ಲಿ ಭಾಗವಹಿಸಬೇಕಾಗಿದೆ. ದೇಶದಲ್ಲಿ ಕಪ್ಪು ಹಣ ಚಲಾವಣೆ ತಡೆಯುವಲ್ಲಿ ಸರ್ಕಾರದ ಪಾತ್ರ ಪ್ರಮುಖ. ಅದೇ ರೀತಿ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಬಾಲಕೃಷ್ಣನ್ ಮನವಿ ಮಾಡಿದರು.
Click this button or press Ctrl+G to toggle between Kannada and English