[1]ಮಂಗಳೂರು: ಬೇಟೆಗೆಂದು ತೆರಳಿದ್ದ ಇಬ್ಬರು ಯುವಕರು ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ನಡೆದಿದೆ. ಮೂಡುಬಿದ್ರೆ ನಿವಾಸಿಗಳಾದ ಪ್ರವೀಣ್ ತೌರೋ (33) ಹಾಗೂ ಗ್ರೆಷನ್ (32) ನಾಪತ್ತೆಯಾದವರಾಗಿದ್ದಾರೆ.
ಮೂಡುಬಿದ್ರೆಯಿಂದ 10 ಕಿ.ಮೀ ದೂರದ ಕರಿಂಜೆ ಕಾಡಿಗೆ ಸೋಮವಾರ ರಾತ್ರಿ ತೆರಳಿದ್ದರು. ಬೇಟೆಗೆಂದು ತೆರಳಿದ್ದ ಈ ಯುವಕರು ಆ ಬಳಿಕ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.
ಪ್ರವೀಣ್ ಹಾಗೂ ಗ್ರೆಷನ್ ಬೇಟೆಗೆ ತೆರಳುವ ಸಂದರ್ಭದಲ್ಲಿ ಬಳಸಿದ್ದ ಜೀಪ್ ಕರಿಂಜೆ ಕಾಡಂಚಿನಲ್ಲಿ ಪತ್ತೆಯಾಗಿದೆ. ಆದರೆ ಕಾಡಿಗೆ ತೆರಳಿದ್ದ ಯುವಕರು ಏನಾದರು ಎಂಬ ಮಾಹಿತಿ ಲಭ್ಯವಾಗಿಲ್ಲ. ಇಬ್ಬರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು ಯುವಕರ ಮನೆಯವರಲ್ಲಿ ಆತಂಕ ಮೂಡಿದೆ.
ಯುವಕರು ನಾಪತ್ತೆಯಾದ ಕುರಿತು ಪ್ರವೀಣ್ ಹಾಗು ಗ್ರೆಷನ್ ಕುಟುಂಬಸ್ಥರು ಸ್ಥಳೀಯ ಮೂಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಡಿನಲ್ಲಿ ನಾಪತ್ತೆಯಾಗಿರುವ ಯುವಕರಿಗಾಗಿ ಮೂಡಬಿದ್ರೆ ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ಆರಂಭಿಸಿದ್ದಾರೆ.
ಖಾಸಗಿ ಟೆಂಪೊ ಚಾಲಕನಾಗಿರುವ ಪ್ರವೀಣ್ ತೌರೋ ಅವಿವಾಹಿತರಾಗಿದ್ದಾರೆ. ಮೂಡಬಿದ್ರೆಯಲ್ಲಿ ಸರ್ವಿಸ್ ಸ್ಟೇಷನ್ ಹೊಂದಿರುವ ಗ್ರೇಷನ್ ವಿವಾಹಿತರಾಗಿದ್ದು, ಓರ್ವ ಪುತ್ರಿ ಇದ್ದಾಳೆ.