[1]ಶಿವಮೊಗ್ಗ: ವರನಟ ಡಾ. ರಾಜ್ಕುಮಾರ್ ಕುಟುಂಬದಲ್ಲಿ ಮತ್ತೊಂದು ಮದುವೆಯ ಸಂಭ್ರಮ ಸಡಗರಕ್ಕೆ ಶಿವಮೊಗ್ಗ ಇಂದು ಸಾಕ್ಷಿಯಾಯ್ತು. ಡಾ. ರಾಜ್ಕುಮಾರ್ ಪುತ್ರಿ ಲಕ್ಷ್ಮಿ ಅವರ ಪುತ್ರ ಷಣ್ಮುಖ (ಶಾನ್ ) ಸಾಗರದ ಖ್ಯಾತ ವಕೀಲ ಬರೂರು ನಾಗರಾಜ್ ಮಗಳು ಸಿಂಧು ಅವರ ವಿವಾಹ ಶಿವಮೊಗ್ಗದ ನವಿಲೆಯ ಸರ್ಜಿ ಇಂಟರ್ನ್ಯಾಷನಲ್ ಕನ್ವೆನ್ಷನ್ ಹಾಲ್ನಲ್ಲಿ ನಡೆಯಿತು.
ಈ ಶುಭ ಸಮಾರಂಭಕ್ಕೆ ಡಾ. ರಾಜ್ಕುಮಾರ್ ಇಡೀ ಕುಟುಂಬವೇ ಆಗಮಿಸಿತ್ತು. ನಟ ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ವಿಜಯ್ ರಾಘವೇಂದ್ರ, ರಾಮ್ ಕುಮಾರ್ ಹಾಗೂ ಅವರ ಕುಟುಂಬದ ಸದಸ್ಯರು ಶುಭ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕೊನೆಯ ಕ್ಷಣದಲ್ಲಿ ನಟ ಧನಂಜಯ್ ಕೂಡಾ ಆಗಮಿಸಿದ್ದರು. ನಟ ಹಾಗೂ ರಾಜಕಾರಣಿ ಕುಮಾರ್ ಬಂಗಾರಪ್ಪ ಕೂಡಾ ಕುಟುಂಬದೊಂದಿಗೆ ಆಗಮಿಸಿ ವಧು ವರರನ್ನು ಆಶೀರ್ವದಿಸಿದರು.
[2]ಸ್ಟಾರ್ ನಟರು ಆಗಮಿಸುತ್ತಿರುವ ವಿಷಯ ತಿಳಿದು ಕನ್ವೆನ್ಷನ್ ಹಾಲ್ ಗೇಟ್ ಬಳಿ ಪುನೀತ್ ಹಾಗೂ ಶಿವರಾಜ್ ಕುಮಾರ್ ಅಭಿಮಾನಿಗಳ ದಂಡೇ ಆಗಮಿಸಿತ್ತು. ಮದುವೆ ಸಮಾರಂಭವಾದ್ದರಿಂದ ನಟರನ್ನು ನೋಡುವ ಭಾಗ್ಯ ಯಾರಿಗೂ ಸಿಗಲಿಲ್ಲ. ಮದುವೆಗೂ ಕೂಡಾ ಕಡಿಮೆ ಸಂಖ್ಯೆಯಲ್ಲಿ ಜನ ಸೇರಿದ್ದರು. ಮುಂದಿನ ವಾರ ಬೀಗರ ಊಟವನ್ನು ಬರೂರು ಅಥವಾ ಸಾಗರದಲ್ಲಿ ನಡೆಸಲು ಯೋಜಿಸಲಾಗಿದ್ದು ಅಲ್ಲಿ ಗ್ರಾಮಸ್ಥರು ಸಾಕಷ್ಟು ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇದೆ.
ರಾಜ್ ಕುಟುಂಬಕ್ಕೂ ಮಲೆನಾಡಿಗೂ ಇರುವ ನಂಟು ಹೊಸತೇನಲ್ಲ. ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡಾ ಮಲೆನಾಡಿನ ಪ್ರಸಿದ್ಧ ರಾಜಕಾರಣಿ ದಿವಂಗತ ಬಂಗಾರಪ್ಪನವರ ಪುತ್ರಿ. ರಾಘವೇಂದ್ರ ರಾಜ್ ಕುಮಾರ್ ಕೂಡಾ ಈ ಭಾಗದವರನ್ನೇ ಮದುವೆಯಾಗಿದ್ದರು, ಈ ಸಂಬಂಧಗಳ ಕೊಂಡಿಯಾಗಿ ಸಾಗರದ ಬರೂರು ಗ್ರಾಮದ ನಾಗರಾಜ್ ಎಂಬುವರ ಪುತ್ರಿ ಸಿಂಧು, ಷಣ್ಮುಖ ಪತ್ನಿಯಾಗಿ ರಾಜ್ ಕುಟುಂಬ ಸೇರಿದ್ದಾರೆ.