ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಉರ್ವಸ್ಟೋರ್ನಲ್ಲಿ ಸುಮಾರು 5 ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಕಾಡೆಮಿ ಕಟ್ಟಡ ‘ತುಳು ಭವನ’ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್ ಜಿಲ್ಲಾ ಉಸ್ತುವಾರಿ ಅವರು ಶನಿವಾರ ಶಿಲಾನ್ಯಾಸ ನೆರವೇರಿಸಿದರು.
ಮೂರು ಮಹಡಿಗಳನ್ನು ಒಳಗೊಂಡಿರುವ ‘ತುಳು ಭವನ’ ಮೊದಲ ಮಹಡಿಯಲ್ಲಿ ಕಾರು ಪಾರ್ಕಿಂಗ್ ಹಾಗೂ ಕಚೇರಿ. ಎರಡನೇ ಮಹಡಿಯಲ್ಲಿ ಸಭಾಂಗಣ. ಮೂರನೇ ಮಹಡಿಯಲ್ಲಿ ಮ್ಯೂಸಿಯಂ, ಅತಿಥಿಗೃಹ, ದಾಸ್ತಾನು ಕೊಠಡಿಯನ್ನು ಹೊಂದಿದೆ. ‘ತುಳು ಭವನ’ದ ಕಾಮಗಾರಿಯನ್ನು ವರ್ಷದೊಳಗೆ ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್ ಅವರು ಹೇಳಿದರು
ತುಳು ಪರಂಪರೆ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಬೇಕು. ಸರಕಾರ ಈಗಾಗಲೇ 2 ಕೋ. ರೂ. ಬಿಡುಗಡೆಗೊಳಿಸಿದೆ. ಈ ಹಣ ಖರ್ಚಾದ ಕೂಡಲೇ ಇನ್ನಷ್ಟು ಹಣ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಅದರೊಂದಿಗೆ ತುಳು ನಾಡಿನ ಜನತೆ ಕೂಡಾ ಹೆಚ್ಚಿನ ಸಹಕಾರ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಧಾನಸಭಾ ಉಪಸಭಾಧ್ಯಕ್ಷ ಎನ್. ಯೋಗೀಶ್ ಭಟ್ ಅವರು. ಶಾಸಕ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಹಂತ ಹಂತವಾಗಿ ಒಟ್ಟು 10 ಲಕ್ಷ ರೂ. ‘ತುಳು ಭವನ’ಕ್ಕೆ ನೀಡುವುದಾಗಿ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿದ್ದರು. ಅಕಾಡೆಮಿ ಅಧ್ಯಕ್ಷ ಪಾಲ್ತಾಡಿ ಡಾ| ರಾಮಕೃಷ್ಣ ಆಚಾರ್ ಅವರು ಪ್ರಸ್ತಾವನೆ ಗೈದರು
ಶಾಸಕ ಯು.ಟಿ. ಖಾದರ್, ಮೇಯರ್ ಪ್ರವೀಣ್, ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಕೆ. ಸೀತಾರಾಮ ಕುಲಾಲ್, ಮನಪಾ ಸದಸ್ಯ ಅಶ್ವಿನ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿದ್ದರು. ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಉಪಸ್ಥಿತರಿದ್ದರು.
ಸದಸ್ಯರಾದ ಜಿ. ದಯಾನಂದ ಕತ್ತಲ್ಸಾರ್ ಸ್ವಾಗತಿಸಿದರು. ಉದಯ ಧರ್ಮಸ್ಥಳ ವಂದಿಸಿದರು. ಡಾ| ದುಗ್ಗಪ್ಪ ಕಜೆಕಾರ್ ಕಾರ್ಯಕ್ರಮ ನಿರೂಪಿಸಿದರು.