[1]ಮೈಸೂರು: ನಾನು ಮಾತನಾಡುವಾಗ ಬಾಯ್ತಪ್ಪಿ ಮಾತನಾಡಿದ್ದೇನೆ. ಅದನ್ನೇ ಇಟ್ಟುಕೊಂಡು ರಾಹುಲ್ ಗಾಂಧಿ, ಸಿದ್ದರಾಮಯ್ಯ ಸಂಭ್ರಮಿಸಿದರು. ನನ್ನ ಬಾಯಿಯಿಂದ ತಪ್ಪು ಮಾತು ಬಂದಿರಬಹುದು. ಆದರೆ, ಕರ್ನಾಟಕದ ಜನತೆ ತಪ್ಪು ನಿರ್ಣಯ ಮಾಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಜನಶಕ್ತಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್ಗೆ ಜೆಡಿಎಸ್ ಪ್ರತಿಸ್ಪರ್ಧಿಯಲ್ಲ. ಜೆಡಿಎಸ್ ಒಂದಷ್ಟು ಶಾಸಕರನ್ನು ಗೆಲ್ಲಬಹುದು. ಆದರೆ, ಕಾಂಗ್ರೆಸ್ ಸರ್ಕಾರ ಬದಲಿಸುವ, ಸಿದ್ದರಾಮಯ್ಯ ಅವರನ್ನು ಓಡಿಸುವ ಶಕ್ತಿ ಬಿಜೆಪಿಗೆ ಮಾತ್ರ ಇದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ ಎಂದರು.
ನಾನು ಮಾತನಾಡುವಾಗ ನನ್ನ ಬಾಯಿಂದ ತಪ್ಪು ಮಾತು ಬಂತು. ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರು ಇದನ್ನೇ ಸಂಭ್ರಮಿಸಿದರು. ನನ್ನ ಬಾಯಿಯಿಂದ ತಪ್ಪು ಮಾತು ಬಂದಿರಬಹುದು. ಆದರೆ ಕರ್ನಾಟಕದ ಜನ ತಪ್ಪು ನಿರ್ಣಯ ಮಾಡೋದಿಲ್ಲ ಎಂದು ತಾವು ಆಡಿದ ಮಾತಿನ ಬಗ್ಗೆ ಸ್ಪಷ್ಟೀಕರಣ ನೀಡುವ ಪ್ರಯತ್ನ ಮಾಡಿದರು.
21 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇದೆ. ಕರ್ನಾಟಕದಲ್ಲೂ ಬಿಜೆಪಿ ಸರ್ಕಾರ ಬರುತ್ತಾ ಎಂದು ಅಮಿತ್ ಶಾ ಪ್ರಶ್ನೆ ಹಾಕಿದಾಗ ಕಾರ್ಯಕರ್ತರು ಹರ್ಷೋದ್ಘಾರ, ಚಪ್ಪಾಳೆ, ಸಿಳ್ಳೆಯಯೊಂದಿಗೆ ಜೈಕಾರ ಹಾಕಿದರು. ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ದೇಶದ ತುಂಬೆಲ್ಲ ಬಿಜೆಪಿ ಸರ್ಕಾರ ಇದೆ. ಕರ್ನಾಟಕದಲ್ಲೂ ಸರ್ಕಾರ ಬದಲಾಗಬೇಕು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು. ಭಾಜಪ ಸರ್ಕಾರ ಅಧಿಕಾರಕ್ಕೆ ಬರುತ್ತಾ ಎಂದು ಏರು ಧ್ವನಿಯಲ್ಲೇ ಪ್ರಶ್ನೆ ಹಾಕಿದರು. ಆಗ ಕಾರ್ಯಕರ್ತರು ಬರುತ್ತದೆ ಎಂದು ಜೋರಾಗಿ ಕೂಗಿದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜು ಸಹೋದರ ಸಂದೇಶ್ ಸ್ವಾಮಿ, ಪುತ್ರ ಸಂದೇಶ್, ಮಹಾನಗರ ಪಾಲಿಕೆ ಸದಸ್ಯ ಮಹದೇವಪ್ಪ ಸೇರಿದಂತೆ ಪ್ರಮುಖರು ಬಿಜೆಪಿಗೆ ಸೇರ್ಪಡೆಯಾದರು.