[1]ಮುಂಬೈ: ಕಾಶ್ಮೀರ ವಿಚಾರವಾಗಿ ಪಾಕಿಸ್ತಾನದ ಮಾಜಿ ಕ್ರಿಕೆಟರ್ ಶಾಹಿದ್ ಆಫ್ರಿದಿಗೆ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸರಿಯಾಗಿ ತಿರುಗೇಟು ನೀಡಿದ್ದಾರೆ.
‘ನಮ್ಮ ದೇಶವನ್ನು ನಿರ್ವಹಿಸಲು ಹಾಗೂ ಮುನ್ನಡೆಸಲು ನಾವು ಸಮರ್ಥ ಜನತೆಯನ್ನು ಹೊಂದಿದ್ದೇವೆ’ ಎಂದು ‘ಕ್ರಿಕೆಟ್ ದೇವರು’ ಖ್ಯಾತಿಯ ಸಚಿನ್ ಹೇಳಿದ್ದಾರೆ.
ಇತ್ತೀಚೆಗೆ ಕಾಶ್ಮೀರದಲ್ಲಿ ಭಾರತೀಯ ಸೇನೆ 12 ಜನ ಭಯೋತ್ಪಾದಕರನ್ನು ಹೊಡೆದುರುಳಿಸಿತ್ತು. ಈ ಬಗ್ಗೆ ಟ್ವೀಟ್ ಮಾಡಿದ್ದ ಪಾಕಿಸ್ತಾನಿ ಮಾಜಿ ಕ್ರಿಕೆಟರ್ ಆಫ್ರಿದಿ, ‘ಕಾಶ್ಮೀರದಲ್ಲಿ ಅಮಾಯಕರು ಹತರಾಗುತ್ತಿದ್ದಾರೆ. ವಿಶ್ವಸಂಸ್ಥೆ ಮತ್ತಿತರ ಅಂತಾರಾಷ್ಟ್ರೀಯ ಮಂಡಳಿಗಳು ಎಲ್ಲಿವೆ? ಈ ರಕ್ತಪಾತವನ್ನು ತಡೆಯಲು ಯಾಕೆ ಪ್ರಯತ್ನಿಸುತ್ತಿಲ್ಲ’ ಎಂದು ಪ್ರಶ್ನಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿನ್ ತೆಂಡೂಲ್ಕರ್, ‘ನಮ್ಮ ದೇಶವನ್ನು ನಿರ್ವಹಿಸಲು ಹಾಗೂ ಮುನ್ನಡೆಸಲು ನಾವು ಸಮರ್ಥ ಜನತೆಯನ್ನು ಹೊಂದಿದ್ದೇವೆ. ಇದನ್ನು ತಿಳಿಯಲು ಹೊರಗಿನವರು ಬೇಕಾಗಿಲ್ಲ ಮತ್ತು ನಾವೇನು ಮಾಡಬೇಕೆಂಬುದನ್ನು ಹೇಳುವ ಅಗತ್ಯವಿಲ್ಲ’ ಎಂದು ಆಫ್ರಿದಿಗೆ ತೀರುಗೇಟು ಕೊಟ್ಟಿದ್ದಾರೆ.
ಇನ್ನು, ಇದೇ ವಿಚಾರವಾಗಿ ಆಫ್ರಿದಿ ವಿರುದ್ಧ ಈಗಾಗಲೇ ಭಾರತದ ಅನೇಕ ನಾಯಕರು, ಕ್ರಿಕೆಟ್ ಆಟಗಾರರು ಆಕ್ರೋಶ ವ್ಯಕ್ತಪಡಿಸಿ, ಪಾಕ್ ಮಾಜಿ ಕ್ರಿಕೆಟಿಗನಿಗೆ ಬಿಸಿ ಮುಟ್ಟಿಸಿದ್ದಾರೆ.