- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹೆಚ್‌‌ಡಿಕೆ, ಬಿಎಸ್‌‌ವೈಯನ್ನು ನಾನು ಸೋಲಿಸುತ್ತೇನೆ: ಸಿಎಂ

siddaramaih [1]ಮೈಸೂರು: ಮಾಜಿ ಸಿಎಂಗಳಾದ ಹೆಚ್‌‌.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್‌‌‌. ಯಡಿಯೂರಪ್ಪರನ್ನ ನಾನು ಸೋಲಿಸುತ್ತೇನೆ. ನನಗೂ ಆ ಶಕ್ತಿ ಇದೆ. ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯನವರು ಮೂರು ಬಾರಿ ಮಾಧ್ಯಮದವರಿಗೆ ಒತ್ತಿ ಒತ್ತಿ ಹೇಳಿದ ಪ್ರಸಂಗ ನಡೆಯಿತು.

ಇಂದು ಸಿಎಂ ಸ್ವಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಈ ಬಾರಿ ಸಿದ್ದರಾಮಯ್ಯನವರನ್ನ ಸೋಲಿಸುತ್ತೇವೆ ಎಂದು ಕುಮಾರಸ್ವಾಮಿ, ಯಡಿಯೂರಪ್ಪ ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದರು. ಕುಮಾರಸ್ವಾಮಿ ಮತ್ತು ಯಡಿಯೂರಪ್ಪನನ್ನ ಚುನಾವಣೆಯಲ್ಲಿ ನಾನು ಸೋಲಿಸುತ್ತೇನೆ. ಅವರೊಬ್ಬರಿಗೆ ಶಕ್ತಿ ಇರುವುದಾ? ಆ ಶಕ್ತಿ ನನಗೂ ಇದೆ. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರನ್ನ ಸೋಲಿಸಲು ನಾನು ಪ್ರಯತ್ನ ಮಾಡುತ್ತೇನೆ ಎಂದರು.

ಇವರಿಬ್ಬರೂ 2006ರಲ್ಲಿ ಒಂದಾಗಿ ನನ್ನನ್ನು ಸೋಲಿಸಲು ಒಂದು ಸಲ ಪ್ರಯತ್ನ ನಡೆಸಿ ಫೇಲ್ ಆಗಿದ್ದಾರೆ. ಆಗಲೂ ಸಹ ದೇವೇಗೌಡರು 10 ದಿನಗಳ ಪ್ರಚಾರ ನಡೆಸಿ ಕಣ್ಣೀರು ಹಾಕಿದರೂ ನನ್ನನ್ನು ಸೋಲಿಸಲು ಆಗಲಿಲ್ಲ. ಜನರು ನನ್ನ ಪರವಾಗಿ ಇದ್ದಾರೆ. ಇನ್ನು ಶ್ರೀನಿವಾಸ್ ಪ್ರಸಾದ್ ಮತ್ತು ವಿಶ್ವನಾಥ್ ನನ್ನ ಕ್ಷೇತ್ರದವರಲ್ಲ. ಅವರಿಂದ ನಾನು 2006ರ ಚುನಾವಣೆಯಲ್ಲಿ ಗೆಲ್ಲಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದರು. ನಾನು ಎಷ್ಟು ಸಾರಿ ಹೇಳಿದರೂ ಮಾಧ್ಯಮದವರು 2 ಕಡೆ ಸ್ಪರ್ಧೆ ಮಾಡುತ್ತೀರಾ ಎಂದು ಕೇಳಿದ್ದನ್ನೇ ಕೇಳುತ್ತೀರಲ್ಲ. ನಾನು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇನ್ನು ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರನ್ನ ಸೋಲಿಸಲು ಒಂದು ವಾರ ಪ್ರಚಾರ ಮಾಡುವುದಿಲ್ಲ. ಕೇವಲ ಒಂದು ದಿನ ಸಾಕು ಎಂದು ವ್ಯಂಗ್ಯವಾಡಿದರು.