[1]ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಟಿಕೆಟ್ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾರುಪತ್ಯ ಮೆರೆದಿದ್ದಾರೆ. ಜೆಡಿಎಸ್ನಿಂದ ಬಂದವರಿಗೆ ಟಿಕೆಟ್ ಕೊಡಿಸುವಲ್ಲಿ ಕಡೆಗೂ ಯಶಸ್ವಿಯಾಗಿದ್ದು, 12 ಹಾಲಿಗಳ ಬದಲು ಹೊಸ ಮುಖಗಳಿಗೂ ಅವಕಾಶ ನೀಡಿದ್ದಾರೆ.
ಹೌದು, ನಿರೀಕ್ಷೆಯಂತೆ ಸಿಎಂ ಶಿಫಾರಸಿಗೆ ಅಂಕಿತ ಹಾಕಿರುವ ಹೈಕಮಾಂಡ್ ಸಿದ್ದು ಅಣತಿಯಂತೆ ಟಿಕೆಟ್ ಹಂಚಿಕೆ ಮಾಡಿದೆ. ಈ ಬಾರಿಯ ಟಿಕೆಟ್ ಹಂಚಿಕೆಯ ಹೈಲೈಟ್ಸ್ ಎಂದರೆ 15 ಮಹಿಳೆಯರಿಗೆ ಟಿಕೆಟ್, ಕಾಂಗ್ರೆಸ್ ಸೇರಿದ 7 ಶಾಸಕರಿಗೂ ಟಿಕೆಟ್ ನೀಡಿರುವುದು. ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್, ನಟಿ ಭಾವನಾ, ನಟ ಶಶಿಕುಮಾರ್ ಟಿಕೆಟ್ ವಂಚಿತರಾದ ಪ್ರಮುಖರಾಗಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಜೊತೆ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಬಾದಾಮಿ ಕ್ಷೇತ್ರದಲ್ಲಿ ಹಾಲಿ ಶಾಸಕ ಚಿಮ್ಮನಕಟ್ಟಿ ಬದಲು ಬೇರೆಯವರಿಗೆ ಅವಕಾಶ ನೀಡಿ ಚಾಮುಂಡೇಶ್ವರಿ ಒಂದೇ ಕ್ಷೇತ್ರದಲ್ಲಿ ಸಿಎಂ ಸ್ಪರ್ಧೆ ಮಾಡಲಿದ್ದಾರೆ.
ಸೌಮ್ಯ ರೆಡ್ಡಿ, ಮೇಯರ್ ಸಂಪತ್ ರಾಜ್, ಅಂಜಲಿ ನಿಂಬಾಳ್ಕರ್, ರೂಪಾ ಶಶಿಧರ್, ಹೆಚ್.ಎಸ್.ಮಂಜುನಾಥ್, ಕೆ.ಫಾತಿಮಾ, ಎಂ.ಡಿ.ಲಕ್ಷ್ಮಿ ನಾರಾಯಣ, ವಾಣಿ ಕೃಷ್ಣಾ ರೆಡ್ಡಿ, ಕೀರ್ತನಾ ರುದ್ರೇಶ್ ಗೌಡ, ಬೈರತಿ ಸುರೇಶ್, ಸಿದ್ದಯ್ಯ, ಬಿ.ಮಂಜೇಗೌಡ, ಎ.ಎಲ್.ಪುಷ್ಪಾ ಎನ್ನುವ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.