- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅತೃಪ್ತ ನಾಯಕ ಮಿಥುನ್ ರೈ ಅವರಿಗೆ ಲೋಕಸಭೆ ಟಿಕೆಟ್ ಸಂಭವ… ಕಾಂಗ್ರೆಸ್ ನಿಂದ ಆಫರ್!

mithun-rai [1]ಮಂಗಳೂರು: ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ ಎಂದು ಬಿಂಬಿತರಾಗಿದ್ದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರಿಗೆ ಕೊನೆಗೂ ನಿರಾಸೆಯಾಗಿದೆ.

ಮಾಜಿ ಸಚಿವ ಹಾಗೂ ಹಾಲಿ ಶಾಸಕ ಅಭಯಚಂದ್ರ ಜೈನ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಮೂಡಬಿದಿರೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ವಚನಭ್ರಷ್ಟತೆ ಆರೋಪ ಎದುರಿಸುತ್ತಿರುವ ಜೈನ್‌ ಈಗಾಗಲೇ ಯುವ ಕಾಂಗ್ರೆಸ್ ನಾಯಕರ ವಿರೋಧ ಕಟ್ಟಿಕೊಳ್ಳಬೇಕಾಗಿದೆ.

ಕಳೆದ ಎರಡು ವರ್ಷಗಳಿಂದ ಅಭ್ಯರ್ಥಿಯನ್ನಾಗಿ ಬಿಂಬಿಸಿ ಸಾಕಷ್ಟು ಖರ್ಚು ಮಾಡಿಸಿ ಈಗ ನಡುನೀರಿನಲ್ಲಿ ಕೈಬಿಟ್ಟ ಪರಿಸ್ಥಿತಿಯನ್ನು ಮಿಥುನ್ ರೈ ಎದುರಿಸುತ್ತಿದ್ದಾರೆ. ಸಿಕ್ಕರೆ ತನಗೂ ಸಿಗಲಿ ಎಂದು ಐವನ್ ಡಿಸೋಜ ಅವರು ಟಿಕೆಟ್ ಗೆ ಕೈ ಹಾಕಿದ್ದೇ ಮುಳುವಾಗಿದೆ ಎಂಬುದು ಕೆಲ ಮುಖಂಡರ ಲೆಕ್ಕಾಚಾರ. ಹಾಗಾಗಿ ಯುವ ಕಾಂಗ್ರೆಸ್ ನಾಯಕರ ಪಾಲಿಗೆ ಅಭಯಚಂದ್ರ ಜೈನ್ ಜೊತೆ ಐವಾನ್ ಕೂಡ ವಿಲನ್ ಆಗಿದ್ದಾರೆ.

ಮಿಥುನ್ ಇಲ್ಲದೆ ಮೂಡಬಿದಿರೆ ಕಾಂಗ್ರೆಸ್ ಪಾಲಿಗೆ ಸುಲಭ ಸಾಧ್ಯವಲ್ಲ ಎಂಬುದು ಎಲ್ಲರಿಗೆ ಗೊತ್ತಿರುವ ವಿಷಯ. ಹಾಗಾಗಿ ಮಿಥುನ್ ಅವರನ್ನು ಓಲೈಸಲು ಕಾಂಗ್ರೆಸ್‌ನಲ್ಲಿ ಹೊಸ ಕಸರತ್ತು ಶುರುವಾಗಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಾಳಯದಲ್ಲಿ ಅಭ್ಯರ್ಥಿಯ ಕೊರತೆ ಇದೆ.

ಈಗಾಗಲೇ ಈ ಸ್ಥಾನಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್, ಪ್ರಭಾವಿ ಮುಖಂಡ ಕಣಚ್ಚೂರು ಮೋನು, ಪಿ.ವಿ. ಮೋಹನ್ ಪ್ರಯತ್ನ ನಡೆಸಿದ್ದಾರೆ. ಈ ಪಟ್ಟಿಯಲ್ಲಿ ಮುಖ್ಯಸಚೇತಕ ಐವನ್ ಡಿಸೋಜ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ.

ಈ ಮಧ್ಯೆ, ಜಿಲ್ಲೆಯಾದ್ಯಂತ ಪ್ರಭಾವ ಹೊಂದಿರುವ ಹಾಗೂ ತನ್ನದೇ ಅಭಿಮಾನಿ ವರ್ಗವನ್ನು ಹೊಂದಿರುವ ಅತೃಪ್ತ ನಾಯಕ ಮಿಥುನ್ ರೈ ಅವರಿಗೆ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡುವ ಪ್ರಸ್ತಾಪವನ್ನು ಹಿರಿಯ ನಾಯಕರು ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಒಂದು ವೇಳೆ, ಇದಕ್ಕೆ ಮಿಥುನ್ ಸಮ್ಮತಿಸಿದರೆ, ಯುವ ಕಾಂಗ್ರೆಸ್ ಹೊಸ ಸ್ಫೂರ್ತಿಯಿಂದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದೆ. ಆದರೆ, ಅವರ ನಿರ್ಧಾರ ಏನು ಎಂಬುದು ಇನ್ನೆರಡು ದಿನಗಳಲ್ಲಿ ಗೊತ್ತಾಗಲಿದೆ.