- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಾಂಗ್ರೆಸ್ಸಿನದೇನಿದ್ದರೂ ಹಣ ಹೊಡೆಯುವ ಭಾಗ್ಯ: ಎಚ್ ಡಿಕೆ ವ್ಯಂಗ್ಯ

kumaraswamy [1]ಮೈಸೂರು: “ಕಾಂಗ್ರೆಸ್ ಪ್ರಣಾಳಿಕೆ ಕೇವಲ ಬೋಗಸ್. 5 ವರ್ಷಗಳಲ್ಲಿ ಈಡೇರಿಸಲಾಗದ್ದನ್ನು ಕಾಂಗ್ರೆಸ್ಸಿಗರು ಮುಂದೆ ಈಡೇರಿಸುತ್ತಾರಾ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ. ಮೇ 12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆಯ ನಿಮಿತ್ತ ಮೈಸೂರಿನಲ್ಲಿ ಪ್ರಚಾರ ನಡೆಸುತ್ತಿರುವ ಅವರು, ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಏ.27 ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಡುಗಡೆ ಮಾಡಿದ ಪ್ರಣಾಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದರು. “ಕಾಂಗ್ರೆಸ್ ನ ಭಾಗ್ಯಗಳು ಬರಿ ಹಣ ಹೊಡೆಯುವ ಭಾಗ್ಯಗಳು. ಭಾಗ್ಯಗಳ ಹೆಸರಲ್ಲಿ ಹಣ ಲೂಟಿ ಮಾಡುತ್ತಿದ್ದಾರೆ.

ಮತ್ತೆ ಹೇಗೆ ಅಧಿಕಾರಕ್ಕೆ ಬರುತ್ತಿರಾ? ನಿಮ್ಮ‌ ಎಲ್ಲಾ ಆಟವನ್ನ ರಾಜ್ಯದ ಜನತೆ ನೋಡುತ್ತಿದ್ದಾರೆ” ಎಂದು ಕಾಂಗ್ರೆಸ್ ಆಡಳಿತದ ವಿರುದ್ಧ ಅವರು ಕಿಡಿಕಾರಿದರು.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ಮಾಡಿದ್ದಾರೆ ಎಂಬ ವದಂತಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು, ಅಮಿತ್ ಶಾ ಅವರು ಭೇಟಿ ಮಾಡಿದಂತೆ ಸಿದ್ದರಾಮಯ್ಯ ಅವರಿಗೆ ಕನಸು ಬಿದ್ದಿತ್ತು ಅನ್ನಿಸುತ್ತೆ ಎಂದು ಲೇವಡಿ ಮಾಡಿದರು. ‘ನಾನು ಶಾ ಅವರನ್ನು ಭೇಟಿ ಮಾಡಿದ್ದರೆ ಅದಕ್ಕೆ ಸಿದ್ದರಾಮಯ್ಯ ಸಾಕ್ಷಿ ತೋರಿಸಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಲೂಟಿ ಮಾಡಿ ಈಗ ಅವರೇ ಪರಸ್ಪರ ಕೆಸರೆರಚಾಡುತ್ತಿದ್ದಾರೆ. ಲೋಕಾಯುಕ್ತ ಬಲ ಪಡಿಸುತ್ತೇವೆ ಅಂತ ಪ್ರಣಾಳಿಕೆಯಲ್ಲಿ ಹೇಳುತ್ತಾರೆ. ಹಾಗಾದ್ರೆ ಐದು ವರ್ಷಗಳಲ್ಲಿ ಲೋಕಾಯುಕ್ತವನ್ನು ಸಾಯಿಸಿದ್ದು ಸುಳ್ಳಾ?’ ಎಂದು ಹೆಚ್ ಡಿಕೆ ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷ ಬಲವಿಲ್ಲದೆ, ಝಿರೋ ಆಗಿದೆ. ನಿಮ್ಮ ಜಿಲ್ಲೆಯಲ್ಲಿ ಬಲವಿಲ್ಲದೆ, ಜನತೆ ಹೊರ ಕಳುಹಿಸುತ್ತಿದ್ದಾರೆ.

ಮತಗಳೇನು ಸಿದ್ದರಾಮಯ್ಯ ಮತ್ತು ಕಾಂಗ್ರೆಸಿಗರ ಜೇಬಿನಲ್ಲಿ ಇಲ್ಲ. ಜೆಡಿಎಸ್ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಮುಂದೆ ಇದೆ ಅಂತ ಪೋಲಿಸ್ ಇಂಟಲಿಜೆನ್ಸ್ ರಿಪೋರ್ಟ್ ಕೊಟ್ಟಿದ್ದಾರೆ. ಮುಸ್ಲಿಂ ಮತ ಖರೀದಿಸಲು ಕಾಂಗ್ರೆಸ್ ಪಕ್ಷದವರು ಚನ್ನಪಟ್ಟಣದಲ್ಲಿ ಸುತ್ತಾಡುತ್ತಿದ್ದಾರೆ” ಎಂದು ಗುಡುಗಿದರು.