[1]ಬೆಂಗಳೂರು: ಬೆಂಗಳೂರಿನ ಜಯನಗರ ಕ್ಷೇತ್ರದ ಬಿಜೆಪಿ ಶಾಸಕ ವಿಜಯ್ ಕುಮಾರ್(60) ನಿಧನರಾಗಿದ್ದಾರೆ.
ಚುನಾವಣಾ ಪ್ರಚಾರ ಮಾಡುವ ವೇಳೆ ಕುಸಿದು ಬಿದ್ದು ಜಯದೇವ ಆಸ್ಪತ್ರೆ ಸೇರಿದ್ದ ವಿಜಯ್ ಕುಮಾರ್, ಚಿಕಿತ್ಸೆ ಫಲಕಾರಿಯಾಗದೇ ಜಯದೇವ ಆಸ್ಪತ್ರೆಯಲ್ಲೇ ಸಾವನಪ್ಪಿದ್ದಾರೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ.
ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಿಜಯ್ ಕುಮಾರ್, ಜಯನಗರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ನಾಮಪತ್ರ ಸಲ್ಲಿಕೆಗೂ ಮುನ್ನವೇ ಹೃದಯಾಘಾತದಿಂದ ಬಳಲುತ್ತಿದ್ದ ವಿಜಯ್ ಕುಮಾರ್, ಹೃದಯನಾಳಕ್ಕೆ ಸ್ಟಂಟ್ ಹಾಕಿಸಿಕೊಂಡಿದ್ದರು.
ಚುನಾವಣೆಯಲ್ಲಿ ಹೆಚ್ಚು ಓಡಾಟ ನಡೆಸದಂತೆ ವೈದ್ಯರು ಮುನ್ನೆಚ್ಚರಿಕೆ ನೀಡಿದ್ದರೂ ಶಾಸಕ ವಿಜಯ್ ಕುಮಾರ್ ಈ ಬಗ್ಗೆ ಗಮನ ನೀಡಿರಲಿಲ್ಲ.
ನಿನ್ನೆ ರಾತ್ರಿ ಚುನಾವಣೆ ಪ್ರಚಾರ ವೇಳೆ ಕುಸಿದು ಬಿದಿದ್ದ ವಿಜಯ್ ಕುಮಾರ್ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆ ಕರೆತಂದಾಗಲೇ ಹೃದಯ ಬಡಿತ, ಬಿಪಿ ಕುಸಿತ ಕಂಡಿತ್ತು , ವೈದ್ಯರು ವಿಜಯ್ ಕುಮಾರ್ ಬದುಕಿಸಲು ಪ್ರಯತ್ನಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 1 ಗಂಟೆಗೆ ವಿಧಿ ವಶರಾಗಿದ್ದಾರೆ..