[1]ಬೆಳ್ತಂಗಡಿ: ಮತಯಾಚಿಸಲು ಮನೆ ಬಾಗಿಲಿಗೆ ಬಂದ ಶಾಸಕರಿಗೆಗೆ ಬೆಳ್ತಂಗಡಿ ಕ್ಷೇತ್ರದ ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಸಂತ ಬಂಗೇರ ಅವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ.
ನಡ ಗ್ರಾಮದ ಸೂರ್ಯ ದೇವಸ್ಥಾನದ ಬಳಿ ಶಾಸಕ ವಸಂತ ಬಂಗೇರ ಚುನಾವಣಾ ಪ್ರಚಾರಕ್ಕಾಗಿ ಬಂದಾಗ ಗ್ರಾಮಸ್ಥರು ಅಡ್ಡಹಾಕಿದ್ದರು. 4 ವರ್ಷಗಳಿಂದ ಇಲ್ಲಿನ ರಸ್ತೆ ದುರಸ್ತಿಗಾಗಿ ಮನವಿ ಮಾಡುತ್ತಿದ್ದೇವೆ. ನೀವು ಉದ್ದೇಶಪೂರ್ವಕವಾಗಿ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದ್ದೀರಿ ಎಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡರು.
ಶಾಸಕರು ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕರುಗಳು ಎಷ್ಟೇ ಮನವೊಲಿಸಿದರೂ ಗ್ರಾಮಸ್ಥರು ರಸ್ತೆಗೆ ಅಡ್ಡ ನಿಂತು ಆಕ್ರೋಶ ವ್ಯಕ್ತಪಡಿಸಿದರು. ನೀವು ಮತ ಕೇಳಲು ಮಾತ್ರ ಹಳ್ಳಿಗೆ ಬರ್ತೀರಿ, ಆಮೇಲೆ ತಿರುಗಿ ನೋಡುವುದಿಲ್ಲ ಅಂತಾ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಮತದಾನ ಬಹಿಷ್ಕಾರ ಮಾಡುತ್ತಿವಿ ಎಂದು ಗ್ರಾಮಸ್ಥರು ಬೆದರಿಕೆ ಹಾಕಿದರು. ಪೇಚಿಗೆ ಸಿಲುಕಿದ ಶಾಸಕರು ಗ್ರಾಮಸ್ಥರಿಗೆ ಸಮಾಧಾನ ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.