[1]ಮಂಗಳೂರು : ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ದೋಷಿಗಳಿಗೆ ಮರಣ ದಂಡನೆ ವಿಧಿಸುವ ಸುಗ್ರೀವಾಜ್ಞೆಗೆ ನಾವು ಅನುಮೋದನೆ ನೀಡಿದ್ದೇವೆ. ನಮ್ಮ ಸರ್ಕಾರ ಬಡವರು ಮತ್ತು ನಿರ್ಲಕ್ಷಿತರ ಸೇವೆಗೆ ಸಮರ್ಪಿತವಾಗಿದೆ. ಅವರ ಬ್ಯಾಂಕ್ ಖಾತೆಗಳನ್ನು ತೆರೆಯುವ ಮೂಲಕ ಅವರನ್ನು ಸಬಲೀಕರಣಗೊಳಿಸುವಲ್ಲಿ ಮಹತ್ವದ ಹೆಜ್ಜೆಯಿಟ್ಟಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶನಿವಾರ ಮಂಗಳೂರಿನ ನೆಹರೂ ಮೈದಾನಿನಲ್ಲಿ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನೋಟು ಅಮಾನ್ಯೀಕರಣದ ಆಘಾತದಿಂದ ಕಾಂಗ್ರೆಸ್ ಇನ್ನೂ ಹೊರ ಬಂದಿಲ್ಲ. ಕಾಂಗ್ರೆಸ್ ಸುಳ್ಳನ್ನೇ ಹಬ್ಬಿಸುತ್ತದೆ. ಯಾರಾದರೂ ಸತ್ಯ ಹೇಳಿದರೆ ಅದಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ತಂತ್ರಗಳೆಲ್ಲ ಜನರಿಗೆ ಈಗ ಅರಿವಾಗಿದೆ ಎಂದರು.
[2]ಬಿಜೆಪಿ ಗೆದ್ದಾಗಲೆಲ್ಲ ಇವಿಎಂಗಳನ್ನು ತಿರುಚಲಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತದೆ. ಮೇ 15ರಂದು ನೀವು ಮತ್ತೊಮ್ಮೆ ಈ ಆರೋಪವನ್ನು ಕೇಳಲಿದ್ದೀರಿ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ ತನ್ನ ದುರಹಂಕಾರದಿಂದಲೇ ಎಲ್ಲ ರಾಜ್ಯಗಳನ್ನು ಕಳೆದುಕೊಂಡಿದೆ. ಅಂತಹ ನಡವಳಿಕೆಗಳನ್ನು ಜನ ಒಪ್ಪುವುದಿಲ್ಲ. ಕಾಂಗ್ರೆಸ್ ಅನ್ನು ಕರ್ನಾಟಕದ ಜನತೆ ತಿರಸ್ಕರಿಸುವುದು ನಿಶ್ಚಿತ ಎಂದರು.
ರಾಜ್ಯದಲ್ಲಿ ರಾಜಕೀಯ ದ್ವೇಷಕ್ಕಾಗಿ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗುತ್ತಿದ್ದು, ಇದಕ್ಕೆ ಮೇ 12ರಂದು ಕರ್ನಾಟಕ ಜನತೆ ಬಲವಾದ ಉತ್ತರ ನೀಡಲಿದ್ದಾರೆ ಎಂದರು.
ಕೇವಲ ರಾಜಕೀಯ ದ್ವೇಷಕ್ಕಾಗಿ ನಮ್ಮ ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಾಂಗ್ರೆಸ್ ಪಾಲಿಸುವ ಪ್ರಜಾಪ್ರಭುತ್ವ ಇದೇನಾ? ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಪ್ರಶ್ನಿಸಿದ್ದಾರೆ.
[3]ಮುಸ್ಲಿಂ ಮಹಿಳೆಯರ ರಕ್ಷಣೆಗೆ ಸರ್ಕಾರ ಚಿಂತನೆ ನಡೆಸಿದರೆ ಕಾಂಗ್ರೆಸ್ ಅದಕ್ಕೂ ವಿರೋಧ ವ್ಯಕ್ತಪಡಿಸುತ್ತದೆ. ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಹೋದರೆ ಎಲ್ಲಿಗೆ ಹೋಗಿದ್ದೆ ಎಂದು ಕೇಳುತ್ತಾರೆ. ಆದರೆ, ಗಂಡುಮಕ್ಕಳು ಎಲ್ಲಿಗೆ ಹೋಗಿದ್ದರು ಎಂದು ಕೇಳಬೇಕಿದೆ. ಮಕ್ಕಳ ರಕ್ಷಣೆಗೆ ಕಾಂಗ್ರೆಸ್ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ಮುಸ್ಲಿಂ ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿತ್ತು. ತ್ರಿವಳಿ ತಲಾಖ್ ಮೂಲಕ ಅವರ ಬದುಕು ಸಂಕಷ್ಟವಾಗುತ್ತಿತ್ತು. ಇದನ್ನು ತಪ್ಪಿಸಲು ನಾವು ಕಾನೂನು ಜಾರಿಗೆ ತಂದಿದ್ದೇವೆ ಎಂದರು.
2022ರ ವೇಳೆಗೆ ಯಾವ ಬಡವರೂ ಮನೆ ಇಲ್ಲದೆ ಇರಬಾರದು. ಇದು ನಮ್ಮ ಸಂಕಲ್ಪ. ಬಡವರಿಗೆ ಮನೆ ನಿರ್ಮಾಣಕ್ಕೆ ನಾವು ಕೋಟ್ಯಂತರ ರೂ ನೀಡಿದ್ದೇವೆ. ಆದರೆ, ಕಾಂಗ್ರೆಸ್ ಸರ್ಕಾರ ಅದನ್ನು ಅನುಷ್ಠಾನ ಮಾಡಿಲ್ಲ. ಇಂಥವರು ಮೇ12ರಂದು ಮನೆಗೆ ಹೋಗುವುದು ಬೇಡ್ವಾ? ಎಂದು ಪ್ರಶ್ನಿಸಿದ ಮೋದಿ, ನಾವು ನೀಡಿದ ಯೋಜನೆಗಳನ್ನು ಜನರಿಗೆ ತಲುಪಿಸದೆ ರಾಜ್ಯ ಕಾಂಗ್ರೆಸ್ ನಿದ್ದೆ ಮಾಡುತ್ತಿದೆ ಎಂದು ಟೀಕಿಸಿದರು.
[4]ಸುರಕ್ಷಿತ ಕರ್ನಾಟಕ ನಮ್ಮ ಮಿಷನ್. ಹಿಂದೆ ರಾಜೀವ್ಗಾಂಧಿ ಅವರು ಹೇಳಿದ್ದರು ದೆಹಲಿಯಿಂದ 1 ರೂಪಾಯಿ ಬಂದರೆ ಅದು ಹಳ್ಳಿಗಳಿಗೆ ತಲುಪುವ ವೇಳೆಗೆ 15 ಪೈಸೆ ಆಗುತ್ತಿತ್ತು. ಇದು ಹೇಗೆ ಸಾಧ್ಯ? 1 ರೂಪಾಯಿಯಲ್ಲಿ 85 ಪೈಸೆ ಮಧ್ಯವರ್ತಿಗಳ ಜೇಬು ಸೇರುತ್ತಿತ್ತು. ಹಿಂದೆ ಜನರ ಬಳಿಗೆ ಎಷ್ಟು ಹಣ ಹೋಯಿತು ಎಂದು ಲೆಕ್ಕ ಹಾಕಲಾಗುತ್ತಿತ್ತು. ಆದರೆ, ಇಂದು ಜೇಬಿಗೆ ಎಷ್ಟು ಬಂತು ಎಂದು ಕಾಂಗ್ರೆಸ್ ಲೆಕ್ಕ ಹಾಕುತ್ತಿದೆ ಎಂದು ಆಪಾದಿಸಿದರು.