[1]ಕೋಲಾರ: ಪ್ರಧಾನಿ ನರೇಂದ್ರ ಮೋದಿ ಚಿನ್ನದ ನಾಡು ಕೋಲಾರಕ್ಕೆ ಆಗಮಿಸಿದ್ದು, ಅಪಾರ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದು, ಕನ್ನಡದಲ್ಲಿ ಭಾಷಣ ಆರಂಭಿಸಿದ್ದಾರೆ.
ಎಂದಿನಂತೆ ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಚಿನ್ನದ ನಾಡಿನ ಮಹಾಜನತೆಗೆ ನನ್ನ ನಮಸ್ಕಾರಗಳು ಎಂದರು. ಶಕ್ತಿ ದೇವತೆ ಕೋಲಾರಮ್ಮ, ಮುಳುಬಾಗಿಲು ಆಂಜನೇಯ, ಕಾಲಜ್ಞಾನಿ ಕೈವಾರ ತಾತಯ್ಯ, ಸಾಹಿತಿಗಳಾದ ಡಿವಿಜಿ, ಮಾಸ್ತಿ ವೆಂಕಟೇಶ್ ಅಯ್ಯಂಗಾರ ಅವರನ್ನ ನೆನೆದರು.
ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತೆ, ಯಾವ ಪಕ್ಷ ಸೋಲುತ್ತೆ ಎಂಬುದು ಮಹತ್ವದಲ್ಲ. ಬದಲಿಗೆ ಯಾರು ಅಭಿವೃದ್ಧಿ ಮಾಡುತ್ತಾರೆ ಎಂಬುದು ಬಹಳ ಮುಖ್ಯ. ಈ ಬಾರಿ ಕಾಂಗ್ರೆಸ್ಗೆ ವಿದಾಯ ಹೇಳುವ ಸರದಿ ಕರ್ನಾಟಕದ್ದು ಎಂದ ಮೋದಿ, ಕಳೆದ ಐದು ವರ್ಷದಲ್ಲಿ ರಾಜ್ಯದ ಕೀರ್ತಿ ಮಣ್ಣು ಪಾಲು ಮಾಡಿರುವ ಕಾಂಗ್ರೆಸ್ ರೋಗದಿಂದ ಬಳಲುತ್ತಿದೆ ಎಂದರು.
[2]ಸದ್ಯ ಕಾಂಗ್ರೆಸ್ ಆರು ರೋಗಗಳಿಂದ ಬಳಲುತ್ತಿದ್ದು, ಅದರ ವೈರಸ್ನ್ನ ಎಲ್ಲಡೆ ಹರಡುತ್ತಿದೆ. ಬೆಂಗಳೂರು, ಮೈಸೂರು, ಮಂಗಳೂರು, ಕೋಲಾರ ರಾಜ್ಯಕ್ಕೆ ಕೀರ್ತಿ ತರುವ ಜಿಲ್ಲೆಗಳಾಗಿದ್ದು, ಅವುಗಳ ಕೀರ್ತಿಯನ್ನ ಕಾಂಗ್ರೆಸ್ ಮಣ್ಣುಪಾಲು ಮಾಡುತ್ತಿದೆ ಎಂದರು.
ಕಾರ್ಯಕ್ರಮಕ್ಕಾಗಿ ಬಂಗಾರಪೇಟೆ ಪಟ್ಟಣದ ಹೊರವಲಯ ಬೀರಂಡಹಳ್ಳಿ ಗ್ರಾಮದ ಬಳಿ ನಿರ್ಮಾಣ ಮಾಡಲಾಗಿರುವ ಬೃಹತ್ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಸೇರಿ ಒಟ್ಟು 13 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು, ಮೂರು ಜಿಲ್ಲೆಯ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.