[1]ಮಂಗಳೂರು: ಸಚಿವ ರಮಾನಾಥ ರೈ ಆಪ್ತನ ಮೇಲೆ ದುಷ್ಕರ್ಮಿಗಳು ರಾತ್ರಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.
ಬಂಟ್ವಾಳ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಸಂಜೀವ ಪೂಜಾರಿ ಬಂಟ್ವಾಳ ತಾಲೂಕಿನ ಸಜೀಪ ಮೂಡದಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದ ವೇಳೆ ಮನೆ ಬಳಿ ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಕಾರಿಗೆ ಕಲ್ಲು ಹೊಡೆದು ಹಾನಿ ಮಾಡಿದ್ದಾರೆ.
ಇದರಿಂದ ಭಯಗೊಂಡು ಮನೆಗೆ ಹೋದ ಸಂಜೀವ ಪೂಜಾರಿ ಅವರನ್ನು ಹಿಂಬಾಲಿಸಿದ ಸುಮಾರು 20 ದುಷ್ಕರ್ಮಿಗಳ ತಂಡ ಮನೆಗೆ ನುಗ್ಗಿ ಹಲ್ಲೆ ನಡೆಸಿದೆ. ಘಟನೆಯಲ್ಲಿ ಸಂಜೀವ ಪೂಜಾರಿ ಅವರ ಪತ್ನಿ ವಾಸಂತಿ ಪೂಜಾರಿ ಸೇರಿದಂತೆ ನಾಲ್ವರಿಗೆ ಗಾಯವಾಗಿದ್ದು ಬಂಟ್ವಾಳ ತಾಲೂಕಿನ ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.