[1]ಬೆಂಗಳೂರು: ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನಕ್ಕೆ ಇಂದು ರಾಜ್ಯಪಾಲರು ಒಪ್ಪಿಗೆ ಸೂಚಿಸಿದರೆ ನಾಳೆ ರಾಜಭವನದಲ್ಲಿ ಯಡಿಯೂರಪ್ಪ ಒಬ್ಬರೇ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಬಹುಮತ ಸಾಬೀತಿನ ನಂತರ ಸಂಪುಟ ರಚನೆ ಮಾಡಲಿದ್ದಾರೆ ಎನ್ನಲಾಗಿದೆ.
ಬಿಜೆಪಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ಕೊಡುವುದು ಬಹುತೇಕ ಖಚಿತವಾಗಿದ್ದು, ಇಂದು ಸಂಜೆ 6 ಗಂಟೆ ಬಳಿಕ ರಾಜ್ಯಪಾಲ ವಜುಭಾಯ್ ವಾಲಾ ತಮ್ಮ ನಿರ್ಧಾರ ಪ್ರಕಟ ಮಾಡಲಿದ್ದಾರೆ. ರಾಜ್ಯಪಾಲರು ಅನುಮತಿ ಕೊಟ್ಟರೆ ಮಾತ್ರ ನಾಳೆ ಯಡಿಯೂರಪ್ಪ ಒಬ್ಬರಿಂದ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ. ರಾಜಭವನದಲ್ಲಿ ನಾಳೆ ಮಧ್ಯಾಹ್ನ 12.20ಕ್ಕೆ ಪ್ರಮಾಣ ವಚನಕ್ಕೆ ಮುಹೂರ್ತ ನಿಗದಿಯಾಗಿದ್ದು, ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ನಡುವೆ ಶಾಸಕರ ಸಂಖ್ಯಾಬಲ ತೋರಿಸಲು ಯಡಿಯೂರಪ್ಪ ರಾಜ್ಯಪಾಲರಿಂದ ಒಂದು ವಾರ ಸಮಯಾವಕಾಶ ಕೇಳಿದ್ದು, ಸಮಯಾವಕಾಶ ಕೊಡಲು ರಾಜ್ಯಪಾಲರು ಒಪ್ಪಿದ್ದಾರೆ ಎನ್ನಲಾಗಿದೆ. ಹಾಗಾಗಿ ಒಂದು ವಾರದಲ್ಲಿ ಬಹುಮತ ಸಾಬೀತು ಮಾಡಲು ದಿನಾಂಕ ನಿಗದಿ ಮಾಡಿಕೊಂಡಿರುವ ಬಿಜೆಪಿ ನಾಯಕರು, ಇದೇ 27 ರಂದು ಯಡಿಯೂರಪ್ಪ ಸಂಪುಟ ಸಹೋದ್ಯೋಗಿಗಳ ಪ್ರಮಾಣ ವಚನಕ್ಕೆ ದಿನಾಂಕ ನಿಗದಿ ಮಾಡಿಕೊಳ್ಳಲಾಗಿದೆ. ಅಂದೇ ಬಹುಮತ ಸಾಬೀತುಪಡಿಸಿ ಸಂಪುಟ ರಚನೆ ಮಾಡಲು ಬಿಎಸ್ವೈ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇದೆಲ್ಲಾ ಬೆಳವಣಿಗೆ ರಾಜ್ಯಪಾಲರ ನಿರ್ಧಾರದ ಮೇಲೆ ಅವಲಂಭಿಸಿದೆ.