[1]ಬೆಂಗಳೂರು: ಬಿಜೆಪಿ ಸರ್ಕಾರ ರಚನೆ ಕಸರತ್ತು ಚುರುಕು ಪಡೆಯುತ್ತಿದ್ದಂತೆ ಎಚ್ಚೆತ್ತ ಜೆಡಿಎಸ್-ಕಾಂಗ್ರೆಸ್ ಶಾಸಕಾಂಗ ಪಕ್ಷಗಳ ಸಭೆ ನಡೆಸಿತು. ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರನ್ನ ಆಯ್ಕೆ ಮಾಡಿಕೊಂಡ ಎರಡು ಪಕ್ಷಗಳು 118 ಶಾಸಕರ ಸಹಿ ಪಡೆದು ರಾಜ್ಯಪಾಲರಿಗೆ ಪತ್ರ ಸಿದ್ಧಪಡಿಸಿದವು. ಈ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ಕಾಂಗ್ರೆಸ್ನ 78 ಹಾಗೂ ಇಬ್ಬರು ಪಕ್ಷೇತರರು ಮತ್ತು ಜೆಡಿಎಸ್ನ 38 ಶಾಸಕರು ರಾಜಭವನಕ್ಕೆ ತೆರಳಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ನ 7 ಶಾಸಕರು ರಾಜ್ಯಪಾಲರನ್ನ ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮತ್ತೊಮ್ಮೆ ಮನವಿ ಮಾಡಿದರು. ಎರಡು ಶಾಸಕಾಂಗ ಪಕ್ಷದ ನಿರ್ಣಯಗಳನ್ನ ರಾಜ್ಯಪಾಲರ ಮುಂದಿಟ್ಟರು.
ಸರ್ಕಾರ ರಚನೆಗೆ ಅಗತ್ಯವಾದ ಸಂಖ್ಯಾಬಲಕ್ಕಿಂತ ಹೆಚ್ಚಿನ ಶಾಸಕರನ್ನ ನಾವೂ ಹೊಂದಿದ್ದು, ನಮಗೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಕೋರಿದರು. ಜೆಡಿಎಸ್ ಪರ ಸಿಎಂ ಅಭ್ಯರ್ಥಿ ಕುಮಾರಸ್ವಾಮಿ ಕಾಂಗ್ರೆಸ್ ಪರ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಸೇರಿದಂತೆ 7 ಶಾಸಕರು ರಾಜ್ಯಪಾಲರ ಎದುರು ಹಾಜರಿದ್ದರು. ಬಳಿಕ ಮಾತನಾಡಿದ ಕುಮಾರಸ್ವಾಮಿ ಎರಡು ಪಕ್ಷಗಳು ಕೈಗೊಂಡಿರುವ ನಿರ್ಣಯಗಳನ್ನ ರಾಜ್ಯಪಾಲರಿಗೆ ತಿಳಿಸಿದ್ದು, ಸರ್ಕಾರ ರಚನೆಗೆ ಅವಕಾಶ ಕೋರಿದ್ದೇವೆ. ರಾಜ್ಯಪಾಲರು ಕಾನೂನು ಸಲಹೆ ಪಡೆದು ಸೂಕ್ತ ತೀರ್ಮಾನ ಕೈಗೊಳ್ಳುತ್ತೆನೆಂದು ತಿಳಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ರಾಜ್ಯಪಾಲರಿಗೆ ಸುಭದ್ರ ಸರ್ಕಾರ ನೀಡುವ ಭರವಸೆ ನೀಡಿದ್ದೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಕಾರ್ಯಾಧ್ಯಕ್ಷ ಎಸ್ಆರ್ ಪಾಟೀಲ್ ಹಾಜರಿದ್ದರು.