[1]ಬೆಂಗಳೂರು: ರಾಜ್ಯ ಸರ್ಕಾರ ರಚನೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನ ಕಸರತ್ತು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ನಡುವೆಯೇ ಪಕ್ಷಗಳಿಗೆ ಆಪರೇಷನ್ ಭೀತಿ ಎದುರಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ತನ್ನ ಶಾಸಕರನ್ನು ಆಪರೇಷನ್ ಗೆ ಒಳಗಾಗದಂತೆ ರೆಸಾರ್ಟ್ ಮತ್ತು ಹೋಟೆಲ್ ಗಳಲ್ಲಿ ಕೂಡಿಹಾಕಿವೆ.
ಇದರ ನಡುವೆ ಫಲಿತಾಂಶ ಪ್ರಕಟಗೊಂಡಂದಿನಿಂದ ನಾಪತ್ತೆಯಾಗಿರುವ ಶಾಸಕ ಆನಂದ್ ಸಿಂಗ್ ಬಗ್ಗೆ ವ್ಯಾಪಕ ಕುತೂಹಲ ಮೂಡಿದೆ. ಆನಂದ್ ಸಿಂಗ್ ಮರಳಿ ಬಿಜೆಪಿ ತೆಕ್ಕೆಗೆ ಮರಳಿದ್ದಾರೆ ಎನ್ನುವ ಮಾತುಗಳು ರಾಜಕೀಯವ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿವೆ.
ಚುನಾವಣಾ ಫಲಿತಾಂಶ ಪ್ರಕಟಗೊಂಡ ದಿನದಿಂದಲೂ ಶಾಸಕ ಆನಂದ್ ಸಿಂಗ್ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ. ಫಲಿತಾಂಶದ ದಿನ ಆನಂದ್ ಸಿಂಗ್ ಕಾರಿನಲ್ಲಿ ಅಜ್ಞಾತ ಸ್ಥಳವೊಂದಕ್ಕೆ ತೆರಳಿದ್ದರು. ಆದರೆ ಈ ಸಂದರ್ಭ ದಿನನಿತ್ಯ ಜೊತೆಗಿದ್ದ ಚಾಲಕನನ್ನು ಬಿಟ್ಟು ಬೇರೊಬ್ಬ ಚಾಲಕನ ಜೊತೆಗೆ ತೆರಳಿದ್ದರು ಎನ್ನಲಾಗಿದೆ. ಅತ್ತ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ ನಲ್ಲಿ ಇರಿಸುವ ಸಂದರ್ಭ ಆನಂದ್ ಸಿಂಗ್ ಅವರ ಅನುಪಸ್ಥಿತಿ ತೀವ್ರ ಸದ್ದು ಮಾಡಿತ್ತು.
ಈ ನಡುವೆ ನಿನ್ನೆ ಸಂಜೆ ವೇಳೆಗೆ ಬೆಂಗಳೂರಿಗೆ ಆಗಮಿಸುತ್ತಿರುವುದಾಗಿ ಶಾಸಕ ಆನಂದ್ ಸಿಂಗ್ ಅವರು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಆನಂದ್ ಸಿಂಗ್ ರನ್ನು ಕರೆತರಲು ಜೆಡಿಎಸ್ ನಿಂದ ಕಾಂಗ್ರೆಸ್ ಸೇರಿ ಗೆದ್ದಿದ್ದ ಶಾಸಕ ಜಮೀರ್ ಅಹ್ಮದ್ ಅವರು ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಆದರೆ ಅಲ್ಲಿ ಆನಂದ್ ಸಿಂಗ್ ಸಿಗದ ಹಿನ್ನೆಲೆಯಲ್ಲಿ ವಾಪಸಾಗಿದ್ದರು.
ಆನಂದ್ ಸಿಂಗ್ ಈ ನಡೆ ತೀವ್ರ ಕುತೂಹಲ ಮೂಡಿಸಿದೆ. ಈ ಚುನಾವಣೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಆನಂದ್ ಸಿಂಗ್ ಮತ್ತೆ ಬಿಜೆಪಿ ತೆಕ್ಕೆ ಸೇರಿದ್ದಾರೆ ಎನ್ನುವ ಅನುಮಾನ ರಾಜಕೀಯ ವಲಯದಲ್ಲಿ ಮೂಡಿದೆ.